ಬೈಕ್ ಸವಾರರ ದರೋಡೆಗೆ ಸಂಚು: ಐವರ ಬಂಧನ

Update: 2019-10-31 13:57 GMT

ಉಳ್ಳಾಲ: ಬೈಕ್ ಸವಾರರನ್ನು ದರೋಡೆಗೈಯ್ಯಲು ಸಂಚು ರೂಪಿಸಿದ್ದ ಆರೋಪದಲ್ಲಿ ಐವರು ದರೋಡೆಕೋರರನ್ನು ಉಳ್ಳಾಲ ಎಸ್‍ಐ ಮತ್ತು ರೌಡಿನಿಗ್ರಹದಳದ ತಂಡ ಬುಧವಾರ ತಡರಾತ್ರಿ 3 ಗಂಟೆಯ ವೇಳೆಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಕಲ್ಲಾಪು ನಿವಾಸಿ ನಿಶಾನ್(22), ಕೋಟೆಕಾರ್ ನಿವಾಸಿಗಳಾದ ಹರ್ಷದ್ ಇಕ್ಬಾಲ್(26), ಇರ್ಷಾದ್ (26) ಮುಕ್ಕಚ್ಚೇರಿ ನಿವಾಸಿ ಇರ್ಫಾನ್(25) ಮತ್ತು ದೇರಳಕಟ್ಟೆ ನಿವಾಸಿ ನೌಶಾದ್(24)ಎಂದು ಗುರುತಿಸಲಾಗಿದೆ. 

ಬಂಧಿತ ಆರೋಪಿಗಳಿಂದ ಕತ್ತಿ, ರಾಡ್ ಮತ್ತು ಆರೋಪಿಗಳು ಬಳಸಿದ ನಂಬರ್ ಪ್ಲೇಟ್ ಇಲ್ಲದ ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ತಡರಾತ್ರಿ ಬೈಕ್‍ನಲ್ಲಿ ಹಣದ ಮೊತ್ತದೊಂದಿಗೆ ತಂಡವೊಂದು ಬರಲಿದೆ ಎಂಬ ಮಾಹಿತಿ ಆರೋಪಿಗಳ ಕಿವಿಗೆ ಬಿದ್ದಿತ್ತು. ಅವರನ್ನು ದರೋಡೆ ಮಾಡಲೆಂದು ಆರೋಪಿಗಳು ಉಚ್ಚಿಲ ಪೆಟ್ರೋಲ್ ಪಂಪ್ ಬಳಿ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇವರ ಕಾರ್ಯತಂತ್ರದ ಬಗ್ಗೆ ಮಾಹಿತಿ ಪಡೆದ ವ್ಯಕ್ತಿಯೊಬ್ಬ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿನಿಗ್ರಹದಳ ಮತ್ತು ಉಳ್ಳಾಲ ಸಬ್‍ಇನ್ಸ್ ಪೆಕರ್ ನೇತೃತ್ವದ ತಂಡ ತಡರಾತ್ರಿ ಮೂರು ಗಂಟೆ ವೇಳೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News