ಸೋಮೇಶ್ವರ, ಪೆರಿಬೈಲ್, ಬೆಟ್ಟಂಬಾಡಿಯಲ್ಲಿ ಮತ್ತೆ ತೀವ್ರಗೊಂಡ ಕಡಲಿನಬ್ಬರ
ಉಳ್ಳಾಲ: ಮಹಾ ಚಂಡಮಾರುತದ ಪರಿಣಾಮ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೋಮೇಶ್ವರ, ಪೆರಿಬೈಲ್, ಬೆಟ್ಟಂಬಾಡಿ ಪ್ರದೇಶಗಳಲ್ಲಿ ಕಡಲಿನಬ್ಬರ ಮತ್ತೆ ತೀವ್ರ ಗೊಂಡಿದ್ದು ಬೆಟ್ಟಂಪಾಡಿಯಲ್ಲಿ ಝೊಹರ ಅಬ್ದುಲ ಅವರ ಮನೆ ಅಪಾಯದಂಚಿನಲ್ಲಿದೆ.
ಅವರ ಮನೆಯ ಸ್ನಾನದ ಕೊಠಡಿ ಸಮುದ್ರ ಸೇರಿದೆ. ಸೋಮೇಶ್ವರ ದೇವಸ್ಥಾನ ಸಮೀಪ ಮೋಹನ್ ಅವರ ಮನೆಯ ಸ್ನಾನದ ಕೊಠಡಿ ಸೇರಿದಂತೆ ಒಂದು ಭಾಗದ ಗೋಡೆ ಗುರುವಾರ ತಡರಾತ್ರಿ ಸಮುದ್ರ ಪಾಲಾಗಿದೆ. ಮೋಹನ್ ಬಾಡಿಗೆಗೆ ನೀಡಿದ್ದ ಕಟ್ಟಡದ ಗೋಡೆ ಸಮುದ್ರ ಸೇರಿದೆ. ಅವರ ಮನೆ ಸಮೀಪದ ಶೇಖರ್ ಅವರ ತೆಂಗಿನ ಮರ ಸಮುದ್ರ ಪಾಲಾಗಿದೆ.
ಕಡಲಿನಬ್ಬರದಿಂದ ಬಹಳಷ್ಟು ನಷ್ಟ ಸಂಭವಿಸಿದರೂ ಮೋಹನ್ ರವರಿಗೆ ಈವರೆಗೆ ಕೇವಲ 95 ಸಾವಿರ ಪರಿಹಾರ ಸಿಕ್ಕಿದೆ. ಇನ್ನಷ್ಟು ಪರಿಹಾರ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಝೊಹರ ಅಬ್ದುಲ ಅವರಿಗೆ ಕೇವಲ 8 ಸಾವಿರ ಮಾತ್ರ ಪರಿಹಾರ ನೀಡಿದ್ದು ಅವರಿಗಾದ ನಷ್ಟ ವನ್ನು ಅನುಸರಿಸಿ ಪರಿಹಾರ ನೀಡಬೇಕೆಂದು ಸೋಮೇಶ್ವರ ಪುರಸಭೆಯ ಕೌನ್ಸೀಲರ್ ಗಳು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.