ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂಶುದ್ದೀನ್ ಸಂಪ್ಯ ಆಯ್ಕೆ

Update: 2019-11-02 18:29 GMT
ಸಂಶುದ್ದೀನ್, ನಾಗರಾಜ್

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ 'ವಾರ್ತಾಭಾರತಿ' ಪತ್ರಿಕೆಯ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಆಯ್ಕೆಯಾಗಿದ್ದಾರೆ.

ಶನಿವಾರ ಪುತ್ತೂರು ಪತ್ರಿಕಾ ಭವನದಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಸಂಶುದ್ದೀನ್ ಸಂಪ್ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಗ್ರಾಮಾಂತರ ವರದಿಗಾರ ಸಿದ್ದಿಕ್ ಕುಂಬ್ರ ಮತ್ತು ಕರಾವಳಿ ಅಲೆಯ ಉಪ್ಪಿನಂಗಡಿ ವರದಿಗಾರ ಸರ್ವೇಶ್ ಕುಮಾರ್ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಕಡಬ  ವರದಿಗಾರ ಎನ್.ಕೆ. ನಾಗರಾಜ್ ಮತ್ತು ಜತೆ ಕಾರ್ಯದರ್ಶಿಯಾಗಿ ಜಯ ಕಿರಣ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ನಝೀರ್ ಕೊಯಿಲ, ಕೋಶಾಧಿಕಾರಿಯಾಗಿ ದೈಜಿ ವರ್ಲ್ಡ್ ಚ್ಯಾನೆಲ್‌ನ ಪುತ್ತೂರು ವರದಿಗಾರ ಕೃಷ್ಣ ಪ್ರಸಾದ್ ಆಯ್ಕೆಯಾದರು. ಸಂಘದ ಹಿರಿಯ ಸದಸ್ಯರಾದ ಬಿ.ಟಿ. ರಂಜನ್ ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು. ಸದಸ್ಯರಾದ ಕೆ.ಎಸ್. ಬಾಲಕೃಷ್ಣ ಕೊಯಿಲ ಮತ್ತು ಮೇಘಾ ಪಾಲೆತ್ತಾಡಿ ಅವರು  ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಫಲಿತಾಂಶ ಪ್ರಕಟಣೆಯ ಬಳಿಕ ನಿಕಟಪೂರ್ವ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಮತ್ತು ಅವರ ತಂಡ ಅಧಿಕಾರ ಹಸ್ತಾಂತರ ನಡೆಸಿತು. ಸದಸ್ಯರು ನೂತನ ತಂಡವನ್ನು ಅಭಿನಂದಿಸಿ ಮಾತನಾಡಿದರು.

ಇದಕ್ಕೂ ಮೊದಲು ಶನಿವಾರ ಪೂರ್ವಾಹ್ನ ಸಂಘದ ವಾರ್ಷಿಕ ಮಹಾಸಭೆಯು ಸುಧಾಕರ ಸುವರ್ಣ ತಿಂಗಳಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಪ್ರಭಾರ ಕಾರ್ಯದರ್ಶಿ ಅನೀಶ್ ಕುಮಾರ್ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಕೃಷ್ಣ ಪ್ರಸಾದ್ ಮಂಡಿಸಿದರು. ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ಸಭೆಯ ಬಳಿಕ ನೂತನ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News