ಕಂಬಳಪದವು: ವಾಹನ ಅಪಘಾತ, ಲಾರಿ‌ ಚಾಲಕನಿಗೆ ಹಲ್ಲೆ

Update: 2019-11-06 17:05 GMT

ಕೊಣಾಜೆ: ಕಂಬಳಪದವು ಬಳಿ ಲಾರಿ ಹಾಗೂ ಕಾರೊಂದರ ನಡುವೆ  ಡಿಕ್ಕಿ ಸಂಭವಿಸಿ  ಬಳಿಕ ಆಕ್ರೋಶಿತರಾದ ಕಾರಿನಲ್ಲಿದ್ದವರು ಲಾರಿ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದ್ದು, ಈ ಬಗ್ಗೆ  ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುರ್ನಾಡು ನಿವಾಸಿ ತನಿಯಪ್ಪ ಕುಲಾಲ್ ಎಂಬವರ ಪುತ್ರ ಜಗನ್ನಾಥ ಕುಲಾಲ್ ಹಲ್ಲೆಗೊಳಗಾದ ಲಾರಿ ಚಾಲಕ. ಇವರು ನಡುಪದವಿನ ನಿಸಾರ್ ಎಂಬವರ ಲಾರಿ ಚಾಲಕರಾಗಿದ್ದು ಬುಧವಾರ ಸಂಜೆ ಮುಡಿಪುವಿನಿಂದ ಅರ್ಕಾಣ ಮಾರ್ಗವಾಗಿ ಬಂದ ಲಾರಿ ಮುಡಿಪುವಿಗೆ ಹೋಗುವ ನಿಟ್ಟಿನಲ್ಲಿ ಕಂಬಳಪದವಿನಲ್ಲಿರುವ ಮುಖ್ಯ ರಸ್ತೆಗೆ ತಿರುಗಿಸುತ್ತಿದ್ದಾಗ ಮಂಗಳೂರಿನಲ್ಲಿ ಮದುವೆ ಸಮಾರಂಭ ಮುಗಿಸಿ ಮುಡಿಪುವಿನತ್ತ ಹೋಗುತ್ತಿದ್ದ ಮಿನಿಬಸ್ ಮತ್ತು ಕಾರೊಂದು ಬಂದಿದೆ. ಈ ವೇಳೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಚಾಲಕನ‌
ಜೊತೆ ಜಗಳ ನಡೆಸಿದ್ದಾರೆ. ಇದೇ ವೇಳೆ ಮಿನಿ ಬಸ್ಸಿನಲ್ಲಿದ್ದವರೂ ಕೆಳಗೆ ಬಂದು ಸುಮಾರು 15 ಮಂದಿಯ ತಂಡ ಚಾಲಕನಿಗೆ  ಹಲ್ಲೆ ನಡೆಸಿದೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ನಾಟೆಕಲ್‌ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News