ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಬಂಬ್ರಾಣ ಉಸ್ತಾದ್ ಆಯ್ಕೆ
ಮಂಗಳೂರು,ನ.6: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಸಮಿತಿ ಸದಸ್ಯರಾಗಿ ಪ್ರಮುಖ ವಿದ್ವಾಂಸರಾದ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಯ್ಕೆಯಾಗಿದ್ದಾರೆ.
ಸಮಸ್ತ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳರವರ ಅಧ್ಯಕ್ಷತೆಯಲ್ಲಿ ಕಲ್ಲಿಕೋಟೆಯಲ್ಲಿ ಬುಧವಾರ ನಡೆದ ಮುಶಾವರ ಸಭೆಯಲ್ಲಿ ನೇಮಕ ಮಾಡಲಾಯಿತು.
ಕಿರು ಪರಿಚಯ: ಸುಮಾರು 40 ವರ್ಷಗಳಿಂದ ಧಾರ್ಮಿಕ ರಂಗದಲ್ಲಿ ಸೇವೆ ನಿರ್ವಹಿಸುತ್ತಿರುವ ಇವರು 30 ವರ್ಷಗಳಿಂದ ಮುದರ್ರಿಸರಾಗಿ ಸೇವೆಗೆಯ್ಯುತ್ತಿದ್ದಾರೆ. ಇದೀಗ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಹಾಗೂ ವಾಫಿಯ್ಯ ಕಾಲೇಜು ಕೂರ್ನಡ್ಕ ಇದರ ಪ್ರಾಂಶುಪಾಲರಾಗಿ, ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿಯ ಮುದರ್ರಿಸರಾಗಿ ಸೇವೆಗೆಯ್ಯುತ್ತಿದ್ದಾರೆ.
ದಕ್ಷಿಣ ಕರ್ನಾಟಕ ಸಮಸ್ತ ಮುಶಾವರದ ಪ್ರ.ಕಾರ್ಯದರ್ಶಿ, ಎಸ್ವೈಎಸ್ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರು, ಎಸ್ವೈಎಸ್ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷರು, ಕರ್ನಾಟಕ ಮಜ್ಲಿಸುನ್ನೂರ್ನ ಚೀಫ್ ಅಮೀರ್, ಕುಂಬಳೆ ಇಮಾಂ ಶಾಫಿ ಅಕಾಡೆಮಿಯ ಜನರಲ್ ಮ್ಯಾನೇಜರ್, ಕುಂಬ್ಳೆ ಸಿಐಸಿ-ಸಿಆರ್ಸಿ ಚೇರ್ಮಾನ್ ಮುಂತಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.
ಮುಲ್ಕಿ, ಗುರುಪುರ, ಪೇರಮುಗೆರು, ಬಂಬ್ರಾಣ, ಮಣ್ಣಂಗುಯಿ, ಕೂರ್ನಡ್ಕ ಮುಂತಾದ ಸ್ಥಳಗಳಲ್ಲಿ ಮುದರ್ರಿಸರಾಗಿ ಸೇವೆಗೈದಿರುವ ಇವರು ದಾರಿಮಿ, ಫೈಝಿ, ಕೌಸರಿ, ಅರ್ಶದಿ, ಅಝ್ಹರಿ, ಇಂದಾದಿ, ಹನೀಫಿ ಪದವೀದರ ಹಲವಾರು ಶಿಷ್ಯಂದಿರನ್ನು ಹೊಂದಿದ್ದಾರೆ. ಶೈಖುನಾ ಮರ್ಹೂಂ ಕೋಟ ಉಸ್ತಾದ್, ಮರ್ಹೂಂ ಖಾಸಿಂ ಮುಸ್ಲಿಯಾರ್ ತಾಯಲಂಗಾಡಿ, ಶೈಖುನಾ ಕೈಪಟ್ಟ ಮುಹಮ್ಮದ್ ಮುಸ್ಲಿಯಾರ್ ಮುಂತಾದ ಉಲಮಾರ ಶಿಷ್ಯತ್ವವನ್ನು ಪಡೆದುಕೊಂಡಿದ್ದರು.
ಮುಹಮ್ಮದ್ ಹಾಜಿ, ಝುಲೈಖಾ ದಂಪತಿಯ ನಾಲ್ಕನೇ ಪತ್ರನಾಗಿ 1964 ರಲ್ಲಿ ಜನಿಸಿರುವ ಇವರು ಇದೀಗ ವಿಟ್ಲ ಕಡಂಬು ನಿವಾಸಿಯಾಗಿದ್ದಾರೆ.
ಕೆಐಸಿಯಲ್ಲಿ ಸನ್ಮಾನ
ಮುಶಾವರ ಸದಸ್ಯರಾಗಿ ಆಯ್ಕೆಯಾದ ಬಂಬ್ರಾಣ ಉಸ್ತಾದರನ್ನು ಕುಂಬ್ರ ಕೆಐಸಿ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಾದ ಕೆ.ಎಂ ಬಾವಾಹಾಜಿ ಕೂರ್ನಡ್ಕ, ಅಬ್ದುಲ್ ರಝಾಕ್ ಹಾಜಿ ಕೂರ್ನಡ್ಕ, ನೂರ್ ಮುಹಮ್ಮದ್ ನೀರ್ಕಜೆ ಹಾಗೂ ಸಂಸ್ಥೆಯ ಪ್ರಧ್ಯಾಪಕರುಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಅನೀಸ್ ಕೌಸರಿ ಸ್ವಾಗತಿಸಿದರು. ಅಬ್ದುಲ್ ಸತ್ತಾರ್ ಕೌಸರಿ ವಂದಿಸಿದರು.