ಉಚ್ಚಾಟನೆ ಮೊದಲೇ ಪಕ್ಷದ ಸದಸ್ಯತ್ವ ತೊರೆದಿದ್ದೇನೆ: ತೌಫೀಕ್ ಟಿ.ಕೆ.

Update: 2019-11-08 14:52 GMT

ಮಂಗಳೂರು, ನ.8: ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಜನಪರ ಸೇವೆಯಲ್ಲಿ ತೊಡಿಕೊಂಡಿರುವುದನ್ನು ಸಹಿಸದ ಕೆಲವರು ಉಚ್ಚಾಟನೆ ಮಾಡಲು ಮುಂದಾಗಿದ್ದಾರೆ. ನೈಜ ವಿಷಯವೆಂದರೆ ಈಗಾಗಲೇ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ತೊರೆದಿದ್ದೇನೆ ಎಂದು ಮಂಗಳೂರು ಮಹಾನಗರ ಪಾಲಿಕೆಯ 47ನೇ ವಾರ್ಡ್‌ಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ತೌಫೀಕ್ ಟಿ.ಕೆ. ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತನಾಗಿ, ಸಾಮಾಜಿಕ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಬಲಿಷ್ಠ ಭಾರತ ಕಟ್ಟುವ ಮನದಾಸೆ ನನ್ನದು. ಸದಾ ಜನರ ಸೇವೆಯಲ್ಲೇ ಕಾರ್ಯನಿರತನಾಗಿರುವ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಸುದ್ದಿಗಳು ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ಗಮನಕ್ಕೆ ಬಂದಿದೆ. ಪಕ್ಷದಲ್ಲಿನ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶದಿಂದ ನಿರಪರಾಧಿಯನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಶೂಟೌಟ್‌ ಪ್ರಕರಣವೊಂದರಲ್ಲಿ ಅನಗತ್ಯವಾಗಿ ನನ್ನ ಹೆಸರು ಉಲ್ಲೇಖಿಸಿದ್ದರು. ನನ್ನನ್ನು ಅಪರಾಧಿಯನ್ನಾಗಿಸಿದ ಕಾರಣಕ್ಕೆ ಸ್ವತಃ ನಾನೇ ಪಕ್ಷದಿಂದ ಹೊರಬಂದಿದ್ದೇನೆ. ಇದೀಗ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪಕ್ಷೇತರನಾಗಿ ಮಿಲಾಗ್ರಿಸ್ ವಾರ್ಡ್ ನಂ. 47ರಲ್ಲಿ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ತಿಳಿಸಿದರು.

ವಾರ್ಡ್‌ನಲ್ಲಿ ಯುವಕರು ಸೇರಿದಂತೆ ಜನಬೆಂಬಲವಿದೆ. ಈ ಬಾರಿ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲುವು ನನ್ನದೆ. ವಾರ್ಡ್‌ನ ಮತದಾರರು ಬಹುಮತದಿಂದ ಆರಿಸಿ ತರಲಿದ್ದಾರೆ. ಈ ಬಗ್ಗೆ ವಾರ್ಡ್‌ನ ಮತದಾರರೇ ಭರವಸೆ ಕೊಟ್ಟಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ತೌಫೀಕ್ ಟಿ.ಕೆ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News