ಶಿಕ್ಷಕಿಯ ಮೇಲೆ ಮುಖ್ಯೋಪಧ್ಯಾಯನಿಂದ ಅತ್ಯಾಚಾರ ಆರೋಪ : ದೂರು

Update: 2019-11-10 16:05 GMT

ಉಪ್ಪಿನಂಗಡಿ :  ಅತಿಥಿ ಶಿಕ್ಷಕಿಯ ಮೇಲೆ ಶಾಲಾ ಮುಖ್ಯೋಪಧ್ಯಾಯ ಅತ್ಯಾಚಾರವೆಸಗಿದ್ದಾನೆಂದು ಶಿಕ್ಷಕಿಯೋರ್ವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಘಟನೆ ನಡೆದ 7 ತಿಂಗಳು ವಿಳಂಬವಾಗಿ ದೂರು ನೀಡಿದ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಪದ್ಮುಂಜ  ಸರಕಾರಿ ಹಿ.ಪ್ರಾ. ಶಾಲೆ ಮುಖ್ಯೋಪಧ್ಯಾಯ ಮಂಜುನಾಥ (41) ಎಂಬಾತನ ವಿರುದ್ಧ ಅತ್ಯಾಚಾರ ವೆಸಗಿದ ಆರೋಪ ವ್ಯಕ್ತವಾಗಿದ್ದು, ಎಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯ ದಿನ ಶಿಕ್ಷಕಿಯ ಕೆಲಸವನ್ನು ಖಾಯಂ ಮಾಡಿಸುವ ಆಸೆಯೊಡ್ಡಿ ತನ್ನನ್ನು ಶಾಲೆಯಲ್ಲಿ ಅತ್ಯಾಚಾರವೆಸಗಿದ್ದಾನೆಂದೂ, ಘಟನೆಯಿಂದ ಮಾನಸಿಕವಾಗಿ ನೊಂದ ನಾನು ಬೆದರಿ ತಕ್ಷಣಕ್ಕೆ ಪೊಲೀಸರಿಗೆ ದೂರು ನೀಡಿರಲಿಲ್ಲವೆಂದೂ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಶಾಲೆಯಲ್ಲಿ ಮಕ್ಕಳಿಗೆ ಕಲಿಸುವ ಶೈಲಿ ಚೆನ್ನಾಗಿಲ್ಲದ ಕಾರಣ ದೂರು ನೀಡಿದ ಅತಿಥಿ ಶಿಕ್ಷಕಿಯನ್ನು ಕೈಬಿಟ್ಟು ಬೇರೆ ಶಿಕ್ಷಕಿಯನ್ನು ನೇಮಿಸಲಾದ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಧ್ಯಾಯರ ವಿರುದ್ಧ ಸುಳ್ಳು ದೂರು ನೀಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಉಪ್ಪಿನಂಗಡಿ ಪೊಲೀಸರು ಅತ್ಯಾಚಾರ ನಡೆದಿದೆ ಎಂದು ದೂರಿರುವ ಯುವತಿಯನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷಾ ಫಲಿತಾಂಶವನ್ನು ಆಧರಿಸಿ ಆರೋಪಿತ ಮುಖ್ಯೋಪಧ್ಯಾಯನನ್ನು ಕಾನೂನು ಕ್ರಮಕ್ಕೆ ಒಳಪಡಿಸಲಿದ್ದಾರೆ.

ಪ್ರಸಕ್ತ ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News