ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ವ್ಯತ್ಯಾಸದ ಬಗ್ಗೆ ಕ್ರಿಯಾ ಯೋಜನೆ ಅಗತ್ಯ: ಸಿಂಧೂ ರೂಪೇಶ್

Update: 2019-11-13 10:53 GMT

ಮಂಗಳೂರು, ನ.13: ದ.ಕ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿರುವ ಬಗ್ಗೆ ಸ್ಪಷ್ಟವಾದ ಕ್ರಿಯಾ ಯೋಜನೆ ಅಗತ್ಯ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅಭಿಪ್ರಾಯಿಸಿದ್ದಾರೆ.

ಗರ್ಭಪೂರ್ವ ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994ರಡಿ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿನ ವ್ಯತ್ಯಾಸ ಕುರಿತಂತೆ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತರ್‌ರಾಜ್ಯ ಹಾಗೂ ಅಂತರ್ ಜಿಲ್ಲಾ ಮಟ್ಟದ ಸಭೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಲಿಂಗಾನುಪಾತದ ವ್ಯತ್ಯಾಸಕ್ಕೆ ಕಾರಣಗಳೆನ್ನುವ ಬಾಲ್ಯ ವಿವಾಹ, ಕಡಿಮೆ ಸಾಮಾಜಿಕ ಸ್ಥಾನಮಾನ ಮೊದಲಾದವುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾದುದಲ್ಲ. ಆದರೆ ಗಂಡು ಮಗು ಬೇಕೆಂಬ ಹಂಬಲ, ಅಸುರಕ್ಷಿತ ಗರ್ಭಪಾತ ಕಾರಣಗಳು ಅದೆಷ್ಟು ರೀತಿಯಲ್ಲಿ ಈ ಸಾಮಾಜಿಕ ಪಿಡುಗಿಗೆ ಕಾರಣ ಎಂಬುದರ ಬಗ್ಗೆ ಭವಿಷ್ಯದ ದೃಷ್ಟಿಯಿಂದ ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯಾಗಾರ ಯಶಸ್ವಿಯಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿನ ಲಿಂಗಾನುಪಾತದ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು. ಈ ವರ್ಷದ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ಸರಾಸರಿ 850ರಿಂದ 950ರಷ್ಟಿದ್ದ ಲಿಂಗಾನುಪಾತ ಅಕ್ಟೋಬರ್ ತಿಂಗಳಲ್ಲಿ 1,036 ಆಗಿದೆ. ಸಾಮಾಜಿಕ ಸಾಮರಸ್ಯ ಹಾಗೂ ಆರೋಗ್ಯವಂತ ಸಮಾಜಕ್ಕಾಗಿ ನಾವು ಲಿಂಗಾನುಪಾತದ ವ್ಯತ್ಯಾಸದ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಬೇಕಿದೆ ಎಂದರು.

ಲಿಂಗಾನುಪಾತದಲ್ಲಿ ವ್ಯತ್ಯಾಸ, ಕುಸಿತವನ್ನು ತಡೆಗಟ್ಟುವಲ್ಲಿ ನಗರದ ಖಾಸಗಿ ಸ್ಕಾನಿಂಗ್ ಸೆಂಟರ್‌ಗಳ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ತೀವ್ರ ಇರಿಸಿದೆ. ಜಿಲ್ಲೆಯಲ್ಲಿ 8 ಸರಕಾರಿ ಹಾಗೂ 154 ಖಾಸಗಿ ಸ್ಕಾನಿಂಗ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಮಾಹಿತಿಯನ್ನು ಪಡೆಯುವ ಜತೆಗೆ ಗರ್ಭ ಪೂರ್ವ ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ 1994ರ ಬಗ್ಗೆ ಜಾಗೃತಿಯನ್ನು ಕೂಡಾ ಮೂಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಸೆಲ್ವಮಣಿ, ಉಡುಪಿ ಡಿಎಚ್‌ಒ ಡಾ.ಅಶೋಕ್, ಪ್ರಭಾರಿ ಐಎಎಸ್ ಅಧಿಕಾರಿ ಡಾ.ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಡಾ.ರಶ್ಮಿ, ಡಾ.ದಿನೇಶ್, ಡಾ.ವತ್ಸಲಾ, ಡಾ.ರವಿಚಂದ್ರ ಜೆ., ಡಾ.ರಾಮಚಂದ್ರ, ಡಾ.ಕಿಶನ್ ಆಳ್ವ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಸಕ್ಷಮ ಪ್ರಾಧಿಕಾರ, ದ.ಕ. ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಿಕಂದರ್ ಪಾಷಾ ಸ್ವಾಗತಿಸಿದರು. ಡಾ. ಸುಜಯ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News