ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ

Update: 2019-11-13 16:19 GMT

ಉಡುಪಿ, ನ.13:ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ದ್ರತಾ ಮಂಡಳಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ತಾಲೂಕು ಘಟಕ ಇವುಗಳ ಸಹಯೋಗ ದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ‘ಅಪಘಾತ ಜೀವ ರಕ್ಷಕ’ ತರಬೇತಿ ಕಾರ್ಯಗಾರ (ಪ್ರಥಮ ಚಿಕಿತ್ಸೆ)ವನ್ನು ಲಿಟ್ಲ್‌ರಾಕ್ ಅಂಗ್ಲ ಮಾಧ್ಯಮ ಶಾಲೆಯ ವಾಹನಚಾಲಕರಿಗೆ ಬುಧವಾರ ಬ್ರಹ್ಮಾವರದ ಲಿಟ್ಲ್‌ರಾಕ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಯಿತು.

ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರಕಾರದಿಂದ ಅಸಂಘಟಿತ ವಾಹನ ಚಾಲಕರಿಗೆ ನೀಡುವ ಸೌಲ್ಯಗಳ ಬಗ್ಗೆ ವಿವರಿಸಿದರು. ವಾಹನವನ್ನು ಚಲಾಯಿಸುವಾಗ ಯಾವ ರೀತಿ ಜಾಗ್ರತೆ ವಹಿಸಬಹುದು ಮತ್ತು ಪ್ರಥಮ ಚಿಕಿತ್ಸೆ ಪಡೆದು ಯಾವ ರೀತಿ ಜನರ ರಕ್ಷಣೆ ಮಾಡಬಹುದು ಎಂಬ ಬಗ್ಗೆ ಲಹೆ, ಸೂಚನೆಗಳನ್ನು ನೀಡಿದರು.

ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಖಜಾಂಚಿ ಟಿ. ಚಂದ್ರಶೇಖರ್ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ದರು. ಚಾಲಕರು ತಮ್ಮ ಕರ್ತವ್ಯದ ಜೊತೆಗೆ ಅಪಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ಮಹತ್ವದ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.

ಲಿಟ್ಲ್‌ರಾಕ್ ಅಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಡಾ.ಜಾನ್ ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಒಂದನೇ ವೃತ್ತದ ಕಾರ್ಮಿಕ ನಿರೀಕ್ಷಕ ಜೀವನ್‌ಕುಮಾರ್ ಉಪಸ್ಥಿತರಿದ್ದರು. ಪ್ರಥಮ ಚಿಕಿತ್ಸಾ ತರಬೇತು ದಾರರು ಡಾ. ಸತೀಶ್ ರಾವ್, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಾಹನ ಚಾಲಕರಿಗೆ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ 37 ವಾಹನ ಚಾಲಕರು ಭಾಗವಹಿಸಿ ತರಬೇತಿಯನ್ನು ಪಡೆದರು. ಭಾಗವಹಿಸಿದ ವಾಹನ ಚಾಲಕರಿಗೆ ಲಿಟ್ಲ್‌ರಾಕ್ ಅಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ ನೈನಾನ್, ರೆಡ್‌ಕ್ರಾಸ್ ಸಂಸ್ಥೆಯ ಟಿ. ಚಂದ್ರಶೇಖರ್ ಮತ್ತು ಉಡುಪಿ ಜಿಲ್ಲಾ 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಪ್ರವೀಣ್‌ಕುಮಾರ್ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News