ಪುತ್ತೂರು: ಆವರಣ ಗೋಡೆ ಕುಸಿದು ಬಿದ್ದು ಮಹಿಳೆ ಗಂಭೀರ
ಪುತ್ತೂರು: ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲಿ ಆವರಣ ಗೋಡೆ ಕುಸಿದು ಬಿದ್ದು ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ಬುಧವಾರ ನಡೆದಿದೆ.
ಮುಕ್ರಂಪಾಡಿ ನಿವಾಸಿ ಸಾಂತಪ್ಪ ಗೌಡ ಎಂಬವರ ಪತ್ನಿ ಅಕ್ಕಯ್ಯ ಗಾಯಗೊಂಡವರು. ಪುತ್ತೂರು ನಗರದಲ್ಲಿ ಕುಡ್ಸೆಂಪ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಈ ಯೋಜನೆಯನ್ನು ಕೆಯುಐಡಿಎಫ್ಸಿಯವರು ಅನುಷ್ಠಾನಗೊಳಿಸುತ್ತಿದ್ದಾರೆ. ಇದೀಗ ಯೋಜನೆಯ 2ನೇ ಹಂತದ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮುಕ್ರಂಪಾಡಿ ಪರಿಸರದಲ್ಲಿ ಪೈಪ್ಲೈನ್ ಅಳವಡಿಸಲು ಜೆಸಿಬಿಯಿಂದ ಕೆಲಸ ಮಾಡುತ್ತಿರುವಾಗ ಘಟನೆ ಸಂಭವಿಸಿದೆ. ಸಾಂತಪ್ಪ ಗೌಡ ಅವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದ್ದು, ಅವರ ಪತ್ನಿ ಅಕ್ಕಯ್ಯ ಎಂಬವರ ಮೈಮೇಲೆ ಗೋಡೆ ಕುಸಿದ ಕಾರಣ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಪುತ್ತೂರಿನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.