ಚಿನ್ನಾಭರಣ ಕಳವು: ಆರೋಪಿ ಬಂಧನ
Update: 2019-11-15 23:03 IST
ಪಡುಬಿದ್ರಿ: ಪಡುಬಿದ್ರಿ ನಡಿಪಟ್ಣ ಪುತ್ರನ್ ನಿವಾಸದಲ್ಲಿ ಕಳೆದ ವಾರ ನಡೆದ ವಿವಾಹ ವಾರ್ಷಿಕ ಸಮಾರಂಭಕ್ಕೆ ಆಗಮಿಸಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮಂಗಳೂರು ಉರ್ವ ಮಾರಿಗುಡಿ ರಸ್ತೆಯ ಕಾರ್ತಿಕ್ ವಿ.(26) ಎಂಬಾತನನ್ನು ಕಾಪು ವೃತ್ತ ನಿರೀಕ್ಷಕ ಮಹೇಶ್ಪ್ರಸಾದ್ ಮತ್ತು ಪಡುಬಿದ್ರಿ ಠಾಣಾಧಿಕಾರಿ ಸುಬ್ಭಣ್ಣ ಬಿ.ನೇತೃತ್ವದ ತಂಡ ಉರ್ವದಲ್ಲಿ ನ.13 ರಂದು ಬಂಧಿಸಿದೆ.
ಬಂಧಿತನಿಂದ ಕಳವುಗೈದ 22 ಗ್ರಾಂ ತೂಕದ ಚಿನ್ನದ ಬಳೆ-1, 14ಗ್ರಾಂನ ಕಿವಿಯೋಳೆ - 1 ಜತೆ, 10ಗ್ರಾಂ ಹೆಂಗಸರ ಉಂಗುರ-6, 10ಗ್ರಾಂ ಗಂಡರಸ ಉಂಗುರ-5 ಒಟ್ಟು ರೂ. 1,80,000 ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.