ಭಟ್ಕಳ : ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆ

Update: 2019-11-15 17:51 GMT

ಭಟ್ಕಳ: ಎಲ್ಲ ಹಂತದ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಮೊದಲ ಅಧ್ಯತೆ ನೀಡಿ ಪಕ್ಷದ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕಾಂಗ್ರೇಸ್ ಕಾರ್ಯಕರ್ತರಿಗೆ ಸೂಚಿಸಿದರು.

ಅವರು ಶುಕ್ರವಾರ ಇಲ್ಲಿನ ರಾಯಲ್ ಓಕ್ ಹೋಟೆಲ್ ನಲ್ಲಿ ಜರಗಿದ ತಾಲೂಕಿನ ಕಾಂಗ್ರೇಸ್ ಕಾರ್ಯಕರ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಇಂದು ಅಧಿಕಾರವಿದ್ದರೆ ನಾಳೆ ಅಧಿಕಾರವಿರುವುದಿಲ್ಲ, ಸ್ಥಾನ ಶಾಶ್ವತವಲ್ಲ ಅದು ಸ್ವಾಭಾವಿಕವಾಗಿದೆ. ಆದರೆ ಪಕ್ಷಕ್ಕೆ ನಿಷ್ಠರಾಗಿದ್ದು, ಪಕ್ಷ ಸಂಘಟನೆಗೆ ಎಲ್ಲರು ಕಾರ್ಯ ಮಾಡಬೇಕಾಗಿರುವದು ನಮ್ಮೆಲ್ಲರ ಹೊಣೆ. ಜಿಲ್ಲೆಯಲ್ಲಿ ಒಳ್ಳೆಯ ನಾಯಕರು, ಕಾರ್ಯಕರ್ತರಿದ್ದು ಆದರೆ ಸುಭದ್ರ ರೀತಿಯಲ್ಲಿ ಸಂಘಟನೆ ಆಗಬೇಕಿದೆ. ಬೂತ್ ಕಮಿಟಿಗಳ ರಚನೆ ಮಾಡಿ ಹಾಗೆ ಬಿಟ್ಟರೆ ಸಾಲದು ಬದಲಿಗೆ ಅದು ಕ್ರಿಯಾಶೀಲವಾಗಬೇಕು. ನಿತ್ಯವೂ ಬ್ಲಾಕ್ ಪದಾಧಿಕಾರಿಗಳು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಬೂತ್ ಮಟ್ಟದ ಕಮಿಟಿಯವರನ್ನೊಳಗೊಂಡು ಜನರನ್ನು ತಲುಪಿ ಅವರಿಗೆ ಪಕ್ಷದ ಕಾರ್ಯದ ಬಗ್ಗೆ ತಿಳಿಸಬೇಕು. ಇದರಿಂದ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ ಎಂದ ಅವರು, ಸಮ್ಮಿಶ್ರ ಸರಕಾರದ ಪತನಕ್ಕೆ ಬಿಜೆಪಿ ಯಾವ ರೀತಿಯ  ಸಾಹಸ ಮಾಡಿತು ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ. ಅಂದಿನ ವಿಧಾನಸಭಾ ಸಭಾಪತಿ ಅವರು ಅನರ್ಹ ಶಾಸಕರ ಕುರಿತಾಗಿ ನೀಡಿದ ಆದೇಶವನ್ನೇ ಇಂದು ಸುಪ್ರೀಂ ಕೋರ್ಟ ಎತ್ತಿ ಹಿಡಿದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅನರ್ಹರಾಗಿರುವದು ನನ್ನ ಗಮನದಲ್ಲಿ ಮೊದಲಿರಬಹುದು. 

ಕಳೆದ ಮಳೆಗಾಲ ಹಾಗೂ ಅಕಾಲಿಕ ಮಳೆಯಿಂದಾಗಿ ರಾಜ್ಯವೂ ತತ್ತರಿಸಿದೆ. ಇಂದಿನ ಬಿಜೆಪಿ ಸರಕಾರದ ಪ್ರವಾಹಕ್ಕೆ ಸಿಲುಕಿದವರಿಗೆ ಕಷ್ಟ ನಷ್ಟ ಅನುಭವಿಸಿದವರ ಜೀವನ ಕಟ್ಟಿಕೊಳ್ಳಲು ಸರಕಾರವೇನೋ ಆಜ್ಞೆ ಮಾಡಿದೆ ಅದ್ಯಾವುದು ಇನ್ನು ಅನು ಅನುಷ್ಠಾನಕ್ಕೆ ಬಂದಿಲ್ಲದಿರುವದರಿಂದ ರೈತರಿಗೆ, ಕಾರ್ಮಿಕರಿಗೆ ಹಾಗೂ ತತ್ತರಗೊಂಡ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ ಎಂದರು.

ಈ ಹಿಂದೆ ಭಟ್ಕಳದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯರ ಕೆಲಸವನ್ನು ಜನರು ಚುನಾವಣೆಯಲ್ಲಿ ಹೇಗೆ ಮರೆತರು ಎನ್ನುವುದು ಅರ್ಥವಾಗುತ್ತಿಲ್ಲ. ಇದು ಬೇಸರದ ಸಂಗತಿಯಾಗಿದ್ದು, ಜನರು ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಇಲ್ಲದ ವಿಚಾರಕ್ಕೆ ಮರುಳಾಗದೇ ಬದಲಾಗಿ ಪ್ರಜಾಪ್ರಭುತ್ವ ಬಲಪಡಿಸಬೇಕು. ಇವೆಲ್ಲವನ್ನು ಪಕ್ಷದ ಮುಖಂಡರು ಕಾರ್ಯಕರ್ತರ ಕ್ರಿಯಾಶೀಲ ಕೆಲಸದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೇರ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ತಂಜೀ ಸಂಸ್ಥೆ ಅಧ್ಯಕ್ಷ ಎಸ್.ಎಮ್.ಪರ್ವೇಜ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಂತೋಷ ನಾಯ್ಕ ಸೇರಿದಂತೆ ತಾಲೂಕಿನ ಕಾಂಗ್ರೆಸ ಹಿರಿ-ಕಿರಿಯ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು. 

ಗುರುವಾರದಂದು ಕುಮಟಾದಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆ ಮುಗಿಸಿ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅವರು ರಾತ್ರಿ ಮುರ್ಡೇಶ್ವರಕ್ಕೆ ಬಂದು ಇಲ್ಲಿನ ಖಾಸಗಿ ಹೋಟೆಲನಲ್ಲಿ ತಂಗಿದ್ದು ನಂತರ ಅಲ್ಲಿಯೂ ಸಹ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಶುಕ್ರವಾರದಂದು ಬೆಳಗ್ಗೆ ಮುರ್ಡೇಶ್ವರದಿಂದ ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಭಟ್ಕಳಕ್ಕೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News