ದೆಹಲಿಯ ಕಲುಷಿತ ವಾತಾವರಣಕ್ಕೆ ತುಳಸಿ, ಅಲೆವೇರಾ, ಅಮೃತಬಳ್ಳಿ ಬೆಳೆಸುವುದರಿಂದ ಪರಿಹಾರ: ಬಾಬಾ ರಾಮ್‌ದೇವ್

Update: 2019-11-17 12:42 GMT

ಉಡುಪಿ, ನ.17: ಮನೆ ಆವರಣದಲ್ಲಿ ಅಗಾಧವಾದ ಔಷಧೀಯ ಗುಣ ಹೊಂದಿರುವ ತುಳಸಿ, ಅಲೆವೇರಾ, ಅಮೃತಬಳ್ಳಿಗಳನ್ನು ಬೆಳೆಸಬೇಕು. ಡೆಂಗ್, ಚಿಕೂನ್ ಗುನ್ಯದಂತಹ ರೋಗಗಳಿಗೂ ಪರಿಣಾಮಕಾರಿ ಔಷಧವಾಗಿದೆ. ಇದರಿಂದ ವಾತಾವರಣ ಕೂಡ ಶುದ್ಧವಾಗಿರುತ್ತದೆ. ದೆಹಲಿಯ ಕಲುಷಿತ ವಾತಾವರಣ ದೂರ ಮಾಡಬೇಕಾದರೆ ಮೊದಲು ಈ ಕೆಲಸ ಮಾಡಬೇಕು ಎಂದು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಎರಡನೆ ದಿನವಾದ ರವಿವಾರ ಮುಂಜಾನೆ ನಡೆದ ಯೋಗ ಶಿಬಿರದಲ್ಲಿ ಅವರು ಮಾತನಾಡುತಿದ್ದರು.

ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ರಾತ್ರಿ ಏಳು ಗಂಟೆಯೊಳಗೆ ಆಹಾರ ಸೇವಿಸಿದರೆ ಉತ್ತಮ. ಆದರೆ ರಾತ್ರಿ ಎಂಟು ಗಂಟೆಯನಂತರ ಆಹಾರ ಸೇವನೆ ಮಾಡಲೇಬಾರದು. ಅಕ್ಕಿ, ಗೋಧಿ ಪ್ರಮಾಣವನ್ನು ಕಡಿಮೆ ಮಾಡಿ ತರಕಾರಿಗಳ ಸೇವನೆ ಹೆಚ್ಚಿಸಬೇಕು. ಪ್ರತಿದಿನಕ್ಕೆ ಮೂರು ಲೀಟರ್ ನೀರು ಕುಡಿಯಬೇಕು ಎಂದರು.

ಇತರ ದಿನಗಳಿಗಿಂತ ರವಿವಾರ ಹೆಚ್ಚಿನ ಸಮಯವನ್ನು ಯೋಗಾಸನ, ಪ್ರಾಣಾಯಾಮ ಅಭ್ಯಾಸಗಳಿಗೆ ಮೀಸಲಿಡಬೇಕು. ರಜಾ ದಿನ ಎಂಬ ಕಾರಣಕ್ಕೆ ರವಿವಾರ ನಿದ್ರೆ ಹಾಗೂ ಹೊರಗಿನ ಆಹಾರಗಳಿಗೆ ಆದ್ಯತೆ ನೀಡುವುದು ಸರಿಯಲ್ಲ. ಪ್ರತಿಯೊಬ್ಬರು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡ ಬೇಕು ಎಂದು ಅವರು ತಿಳಿಸಿದರು.

ಜನ್ಮದಿನದಂದು ಕ್ಯಾಂಡಲ್ ಉರಿಸುವ ಬದಲು ಹವನಗಳನ್ನು ಮಾಡಬೇಕು. ಮುಖ್ಯಮಂತ್ರಿಯಾಗಿದ್ದ ಖಂಡೂರಿ ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡಿರುವುದರಿಂದ ಅವರ ಕಣ್ಣಿನ ಸಮಸ್ಯೆ ಪರಿಹಾರ ಕಂಡಿತು. ರೇಡಿಯೇಶನ್ ತಡೆ ಶಕ್ತಿ ಹೊಂದಿರುವ ತುಳಸಿ ಗಿಡಕ್ಕೆ ನೀರು ಹಾಕಿ, ಸೂರ್ಯನಿಗೆ ಅರ್ಘ್ಯ ಕೊಡುವುದು ವಿಜ್ಞಾನವಾಗಿದೆ. ಬಾಲಸೂರ್ಯನ ಬಿಸಿಲಿನಲ್ಲಿ ಒಂದು ಗಂಟೆ ನಿಂತರೆ ವಿಟಮಿನ್ ಡಿ ಕೊರತೆ ಆಗುವುದಿಲ್ಲ ಎಂದರು.

ಎರಡನೆಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಮನಸ್ಸಿನ ಏಕಾಗ್ರತೆಗೆ, ದೈಹಿಕ ನೈರ್ಮಲ್ಯ, ಆರೋಗ್ಯ ವೃದ್ಧಿಗೆ ಯೋಗಾಸನ ಸಹಕಾರಿಯಾಗಿದೆ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಅವರ ಪತ್ನಿ ಅನ್ನಪೂರ್ಣ ಅನುವಾದಿಸಿದ ‘ಆಯುರ್ವೇದ ಸಿದ್ಧಾಂತದ ರಹಸ್ಯ’ ಪುಸ್ತಕವನ್ನು ರಾಮ್‌ದೇವ್ ಮತ್ತು ಪೇಜಾವರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಜರಿದ್ದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ಣಾಟಕ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಗೋಪಾಲಕೃಷ್ಣ ಸಾಮಗ, ಪತಂಜಲಿ ಸಮಿತಿಯ ಜ್ಞಾನೇಶ್ವರ ನಾಯಕ್, ಕರಂಬಳ್ಳಿ ಶಿವರಾಮ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಪತಂಜಲಿಯ ಮಹಿಳಾ ಪ್ರಭಾರಿ ಸುಜಾತಾ ಮಾರ್ಲ ಸ್ವಾಗತಿಸಿದರು.

ಯೋಗಮಯ ಕರ್ನಾಟಕ ಯೋಜನೆ

ಕರ್ನಾಟಕ ರಾಜ್ಯವನ್ನು ರೋಗಮುಕ್ತ ಮಾಡುವ ಉದ್ದೇಶದಿಂದ ಯೋಗ ಮಯ ಕರ್ನಾಟಕ ಎಂಬ ಯೋಜನೆಯನ್ನು ಆರಂಭಿಸಲಾಗುವುದು. ಇದಕ್ಕೆ ನುರಿತ ಯೋಗ ಶಿಕ್ಷಕರು ಬೇಕಾಗಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುವುದು ಎಂದು ಬಾಬಾ ರಾಮ್‌ದೇವ್ ಹೇಳಿದರು.

ಕಪಾಲಭಾತಿ, ಭಸ್ತ್ರಿಕಾ, ಅನುಲೋಮ ವಿಲೋಮ, ಭ್ರಾಮರಿ ಮೊದಲಾದ ಪ್ರಾಣಯಾಮಗಳಿಂದಲೇ ಮಧುಮೇಹ, ಬಿಪಿ, ಥೈರಾಯ್ಡ್  ಮೊದಲಾದ ರೋಗಗಳು ಗುಣವಾಗುತ್ತವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News