‘ಬನ್ನಿ ತುಳು ಲಿಪಿ ಕಲಿಯುವ’ ಕಾರ್ಯಾಗಾರ ಉದ್ಘಾಟನೆ

Update: 2019-11-17 14:41 GMT

ಮಲ್ಪೆ, ನ.17: ಉಡುಪಿಯ ಜೈ ತುಳುನಾಡ್, ದುಬೈ- ಕುಡ್ಲ ತುಳು ಪಾತೆರ್ಗ ತುಳು ಒರಿಪಾಗ ಹಾಗೂ ನಮ್ಮ ತುಳುನಾಡ್ ಟ್ರಸ್ಟ್ ಸಹಯೋಗದಲ್ಲಿ ಬನ್ನಿ ತುಳು ಲಿಪಿ ಕಲಿಯುವ ಕಾರ್ಯಾಗಾರವನ್ನು ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಎಂಬುದು ಕೇವಲ ಭಾಷೆ ಯಾಗಿರದೆ ತುಳುನಾಡಿನ ಸಂಸ್ಕೃತಿಯ ಪ್ರತಿರೂಪವಾಗಿದೆ. ತುಳು ಸಾಹಿತ್ಯ, ಸಂಸ್ಕಾರ ಹೊಂದಿರುವ ಸಮೃದ್ಧ ಭಾಷೆ. ಪ್ರತಿಯೊಬ್ಬರು ಕನಿಷ್ಠ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ಕಲಿಯಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ನಗರಸಭಾ ಕೊಡವೂರು ಸದಸ್ಯ ವಿಜಯ ಕೊಡವೂರು ಮಾತನಾಡಿ, ಇಂದು ನಾವು ನಮ್ಮ ಮಾತೃ ಭಾಷೆಯಾದ ತುಳುವನ್ನು ಸಂಪೂರ್ಣವಾಗಿ ಕಡೆಗಣಿಸಿ ಮುನ್ನಡೆಯುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದ ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿದೆ ಎಂದು ಹೇಳಿದರು.

ಅವನತಿಯ ಕಡೆಗೆ ಸಾಗುತ್ತಿರುವ ತುಳು ಭಾಷೆಯನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತುಳು ಭಾಷೆ ರಕ್ಷಿಸುವ ಮೂಲಕ ತುಳು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಆ ಮೂಲಕ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿ ಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಆಕಾಶ್‌ರಾಜ್ ಜೈನ್, ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಪ್ರಕಾಶ್, ಕೊಡವೂರು ಅಯ್ಯಪ್ಪಭಕ್ತವೃಂದದ ಗುರುಸ್ವಾಮಿ ರಾಮ ಶೇರಿಗಾರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶೈಲಜಾ, ಪತ್ರಕರ್ತೆ ಯಶೋದ ಕೇಶವ್, ಜೈತುಳುನಾಡ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಜಿ.ವಿ.ಎಸ್.ಉಲ್ಲಾಳ್ ಉಪಸ್ಥಿತರಿದ್ದರು.

ಜೈ ತುಳುನಾಡ್ ಸಂಘಟಕ ಶರತ್ ಕೊಡವೂರು ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪೂರ್ಣಿಮಾ ಜನಾರ್ದನ್ ವಂದಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಸುಮಾರು 150 ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News