ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್: ನ. 20ರಂದು ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ

Update: 2019-11-18 15:04 GMT

ಬಂಟ್ವಾಳ, ನ. 18: ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಇದರ ಶತಮಾನೋತ್ತರ ಬೆಳ್ಳಿ ಹಬ್ಬವನ್ನು ವೈವಿದ್ಯಮಯವಾಗಿ ಆಚರಿಸಿದ್ದು, ಇದೀಗ ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭಕ್ಕೆ ಸಿದ್ಧಗೊಳ್ಳುತ್ತಿದೆ. ಸುಮಾರು 125 ವರುಷಗಳ ಹಿಂದೆ ಸ್ಥಾಪನೆಗೊಂಡ ಈ ಚರ್ಚ್‍ನ ಅಭಿವೃದ್ಧಿಗಾಗಿ ಹಲವಾರು ಧರ್ಮಗುರುಗಳು ತಮ್ಮ ಉದಾರ ಸೇವಾ ಮನೋಭಾವದಿಂದ ತೊಡಗಿಸಿಕೊಂಡು ಚರ್ಚ್‍ನ ಪ್ರಗತಿಯನ್ನೂ, ಕೀರ್ತಿಯನ್ನು ಎತ್ತಿಹಿಡಿದಿದೆ. 

1893ರಲ್ಲಿ ಬರಿಮಾರ್‍ನಲ್ಲಿ ಚರ್ಚ ಅನ್ನು ಸ್ಥಾಪಿಸಲಾಗಿತ್ತು. ಕಳೆದ ಸುಮಾರು 85 ವರ್ಷಗಳ ಹಿಂದೆ ಸೈಂಟ್ ಜೋಸೆಫ್ ಚರ್ಚ್ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಿಂದ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿಗೆ ಸ್ಥಳಾಂತರಗೊಂಡಿತ್ತು. ಆಗಿನ ಧರ್ಮ ಗುರುಗಳಾಗಿದ್ದ ಫಾದರ್ ಲಿಯೋ ಕರ್ವಾಲೋ ಅವರ ಮುತುವರ್ಜಿಯಲ್ಲಿ ಈ ಚರ್ಚ್  ನಿರ್ಮಾಣವಾಗಿತ್ತು. ಮಂಗಳೂರು ಧರ್ಮಪ್ರಾಂತ್ಯದ ಆಗಿನ ಬಿಷಪ್ ಡಾ.ವಿಕ್ಟರ್ ಫೆರ್ನಾಂಡೀಸ್ ಅವರು 193ರ ನ. 20ರಂದು ಈ ಚರ್ಚ್‍ನ ಉದ್ಘಾಟನೆಯನ್ನು ನೆರವೇರಿಸಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ಅಧಿಕೃತವಾಗಿ ಘೋಷಿಸಿದ್ದರು ಎಂದು ಚರ್ಚ್‍ನ ಇತಿಹಾಸದ ಬಗ್ಗೆ ಮಾಹಿತಿ ನೀಡುತ್ತಾರೆ ಚರ್ಚಿನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಅವರು.

ವಿನೂತನ ಶೈಲಿಯ ಪ್ರವೇಶ ದ್ವಾರ

ಕಂದಾಯ ಇಲಾಖೆಯ ದಾಖಲೆಯಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ದಾಖಲಾಗಿದ್ದರೂ, ಸೈಂಟ್ ಜೋಸೆಫ್ ಚರ್ಚ್ ಬೊರಿಮಾರ್ ಎಂದೇ ಕರೆಯಲಾಗುತ್ತಿತ್ತು. 125ನೇ ವರ್ಷಾಚರಣೆಯ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಚರ್ಚ್ ಮುಂದಿನ ದಿನಗಳಲ್ಲಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂಬ ಹೆಸರಿನಲ್ಲೇ ಮುನ್ನಡೆಯಲಿದ್ದು, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದ ಸವಿನೆನಪಿಗೆ ಅತ್ಯಾಕರ್ಷಕವಾಗಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾದ ಚರ್ಚ್‍ನ ಪ್ರವೇಶ ದ್ವಾರದಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ಬರೆಯಲಾಗಿದೆ.

ಸೈಂಟ್ ಜೋಸೆಫ್ ಹೆಸರಿನಲ್ಲಿ ಆಂಗ್ಲಮಾಧ್ಯಮ ಶಾಲೆ

ಬರಿಮಾರುವಿನಲ್ಲಿದ್ದ ಈ ಚರ್ಚ್ ಸೂರಿಕುಮೇರುಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ವರ್ಷವೇ ಇಲ್ಲಿ ಬೆಥನಿ ಧರ್ಮಭಗಿನಿಯರ ಕಾನ್ವೆಂಟನ್ನು ಆರಂಭಿಸಲಾಗಿದೆ. 1993ರಲ್ಲಿ ಚರ್ಚ್ ಧರ್ಮಗುರುಗಳಾಗಿದ್ದ ಫಾದರ್ ಪೀಟರ್ ಫೆರ್ನಾಂಡಿಸ್ ಅವರ ಸೇವಾವಧಿಯಲ್ಲಿ ಚರ್ಚ್ ಶತಮಾನೋತ್ಸವ ವನ್ನು ಹಾಗೂ ಸಂತ ಜೋಸೆಫ್ ಮಾಧ್ಯಮಿಕ ಶಾಲೆಯ 100ವರ್ಷಗಳ ಸಂಭ್ರಮಾಚರಣೆಯನ್ನೂ ನೆರವೇರಿಸಲಾಗಿತ್ತು. ಪ್ರಸ್ತುತ ಕೆಲವು ವರ್ಷಗಳಿಂದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯನ್ನು ಆರಂಭಿಸಲಾಗಿದೆ ಎಂದು ವಿವರಿಸುತ್ತಾರೆ ಫಾದರ್ ಅವರು. 

ಅಭಿವೃದ್ಧಿ ಕಾರ್ಯಗಳಿಗೆ 152 ಕುಟುಂಬಗಳ ಸಾಥ್

ದೇವಾಲಯ ವ್ಯಾಪ್ತಿಯ 152 ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಚರ್ಚ್‍ನ ಶತಮಾ ನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದ್ದು, ಎಲ್ಲಾ ಕಾರ್ಯಗಳಿಗೆ ಚರ್ಚ್ ವ್ಯಾಪ್ತಿಯ ಕುಟುಂಬಗಳ ತನು ಮನ ಧನದ ಸಹಕಾರದಿಂದಲೇ ನಡೆದಿರುವುದು ವಿಶೇಷ.

ರಾಜ್ಯಕ್ಕೆ ಪ್ರೇರಣೆಯಾಗಿರುವ ಚರ್ಚ್‍ನ ಕೃಷಿಕ್ರಾಂತಿ:

2018ರಿಂದ ಚರ್ಚ್‍ನ ಧರ್ಮಗುರುಗಳಾಗಿ ನಿಯುಕ್ತಿ ಹೊಂದಿದ ಫಾದರ್ ಗ್ರೆಗರಿ ಪಿರೇರಾ ಅವರು ಚರ್ಚ್‍ನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಚರ್ಚ್‍ನ ಜಮೀನಿನಲ್ಲಿ ಕೃಷಿಕ್ರಾಂತಿಯನ್ನೇ ನಡೆಸುವ ಮೂಲಕ ರಾಜ್ಯಕ್ಕೆ ಪ್ರೇರಣೆಯಾಗಿ ನಿಂತಿದ್ದಾರೆ. ಇದು ನಮ್ಮೆಲ್ಲರ ಕೆಲಸಕ್ಕೆ ಹೆಚ್ಚು ಶಕ್ತಿ ತುಂಬಿದೆ. ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಕಳೆದ 2018ರ ಸೆ. 4ರಿಂದ ಆರಂಭಗೊಂದು ತಿಂಗಳಿಗೊಂದರಂತೆ 14 ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರ್ಚ್ ಭಿಷಪ್ ಸಹಿತ ವಿವಿಧ ಪ್ರಾಂತ್ಯಗಳ ಧರ್ಮಾಧ್ಯಕ್ಷರ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮಗಳನ್ನು ನಡೆಸಿರುವುದು ನಮಗೂ ಹೆಮ್ಮೆ ಎನ್ನಿಸಿದೆ.
-ರೋಷನ್ ಬೊನಿಫಾಸ್ ಮಾರ್ಟಿಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ

ಶತಮಾನೋತ್ಸವ ಬೆಳ್ಳಿಹಬ್ಬದ ಸಮಾರೋಪ

ನ. 20ರಂದು ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ. ಚರ್ಚ್ ನೂತನ ಪ್ರವೇಶ ದ್ವಾರವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಉದ್ಘಾಟಿಸಿ, ವಿಶೇಷ ಬಲಿಪೂಜೆಯನ್ನು ನಡೆಸಿ, ಆಶೀರ್ವಚನ ನೀಡುವರು. ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಗೀವರ್ಗೀಸ್ ಮಾರ್ ಮಕಾರಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಡಾ.ಲಾರೆನ್ಸ್ ಮುಖಾಝಿ, ಮೊಗರ್ನಾಡು ಚರ್ಚ್‍ನ ಧರ್ಮಗುರು ಡಾ. ಮಾರ್ಕ್ ಕೆಸ್ಟಲಿನೋ ಸಹಿತ ಅನೇಕ ಧರ್ಮಗುರುಗಳು ಭಾಗವಹಿಸುವರು. ಇದೇ ಸಂದರ್ಭ ಕಲ್ವಾರಿ ಪರ್ವತದ 14 ಶಿಲುಬೆ  ಯಾತ್ರೆ, ಕಾಂಕ್ರೀಟು ರಸ್ತೆ, ನೀರಿನ ಸೌಲಭ್ಯ, ಸೋಲಾರ್ ಲೈಟ್, ಸಿಸಿ ಕ್ಯಾಮೆರಾ ಹಾಗೂ ದ್ವನಿವರ್ಧಕದ ಉದ್ಘಾಟನೆಯೂ ನಡೆಯಲಿದೆ. 11.30ಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸಭಾಕಾರ್ಯಕ್ರಮವು ನಡೆಯಲಿದೆ ಎಂದು ಸೋಮವಾರ ಸೂರಿಕುಮೇರು ಚರ್ಚಿನ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚರ್ಚಿನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಸಿಸ್ಟರ್ ನ್ಯಾನ್ಸಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News