ಹಿಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆವಿಮೆ; ನೋಂದಣಿಗೆ ಸೂಚನೆ

Update: 2019-11-21 14:08 GMT

ಉಡುಪಿ : ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಪಂ ಮಟ್ಟದಲ್ಲಿ ಹಾಗೂ ಉದ್ದು, ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು (ನೀರಾವರಿ) ಉಡುಪಿ ತಾಲೂಕಿನ 15 ಗ್ರಾಪಂ, ಕುಂದಾಪುರ ತಾಲೂಕಿನ 34 ಗ್ರಾಪಂ, ಕಾರ್ಕಳ ತಾಲೂಕಿನ 32 ಗ್ರಾಪಂ ಸೇರಿದಂತೆ ಒಟ್ಟು 81 ಗ್ರಾಪಂಗಳಲ್ಲಿ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 86,000 ರೂ. ಹಾಗೂ ವಿಮಾ ಕಂತು 1,290 ರೂ. (ಪ್ರತಿ ಹೆಕ್ಟರ್‌ಗೆ)ನ್ನು ಪಾವತಿಸಬೇಕಾಗಿದೆ. ನೋಂದಣಿಗೆ ಡಿ.31 ಕೊನೆಯ ದಿನವಾಗಿದೆ.

ಹಿಂಗಾರು ಹಂಗಾಮಿನ ಬೆಳೆಯಾದ ಉದ್ದ (ಮಳೆಯಾಶ್ರಿತ)ನ್ನು ಬ್ರಹ್ಮಾವರ, ಕಾಪು, ಕೋಟ, ಉಡುಪಿ, ಕುಂದಾಪುರ, ಬೈಂದೂರು, ವಂಡ್ಸೆ ಒಟ್ಟು 7 ಹೋಬಳಿಗಳಲ್ಲಿ ವಿಮಾ ಮೊತ್ತ 28,000 ರೂ. (ಪ್ರತಿ ಹೆಕ್ಟರ್)ಗೆ, ವಿಮಾ ಕಂತು 420ರೂ.(ಪ್ರತಿ ಹೆಕ್ಟರ್‌ಗೆ)ನ್ನು ಪಾವತಿಸಬೇಕಾಗಿದೆ. ನೋಂದಣಿಗೆ ನ.30 ಕೊನೆಯ ದಿನವಾಗಿದೆ.

ಹಿಂಗಾರು ಹಂಗಾಮಿನ ಬೆಳೆಯಾದ ನೆಲಗಡಲೆ (ಮಳೆಯಾಶ್ರಿತ) ಬೆಳೆಯನ್ನು ಕುಂದಾಪುರ, ಬೈಂದೂರು, ಕೋಟ ಒಟ್ಟು 3 ಹೋಬಳಿಗಳಲ್ಲಿ ವಿಮಾ ಮೊತ್ತ 46,000 ರೂ. (ಪ್ರತಿ ಹೆಕ್ಟರ್) ಗೆ, ವಿಮಾ ಕಂತು 690 ರೂ. (ಪ್ರತಿ ಹೆಕ್ಟರ್‌ಗೆ)ನ್ನು ಪಾವತಿಸಬೇಕಾಗಿದೆ. ನೊಂದಣಿಗೆ ಡಿ.31 ಕೊನೆಯ ದಿನ.

ಸ್ಥಳೀಯಾಡಳಿತ ಪ್ರದೇಶಗಳನ್ನೊಳಗೊಂಡಂತೆ ರೈತರು ಪಹಣಿಪತ್ರ, ಖಾತೆ/ ಪಾಸ್ ಪುಸ್ತಕ, ಕಂದಾಯ ರಶೀದಿ, ಆಧಾರ್ ಸಂಖ್ಯೆ/ ಆಧಾರ್ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ಒದಗಿಸಿ ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಥವಾ ಬೆಳೆ ವಿಮಾ ಸಂಸ್ಥೆಯ ಮೂಲಕ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.

ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಪ್ರಯೋಜನಗಳು: ಅಧಿಸೂಚಿತ ಘಟಕದಲ್ಲಿ ಬಿತ್ತನೆಯಿಂದ ಕಟಾವಿನ ಪೂರ್ವದವರೆಗೆ ಹವಾಮಾನ ವೈಪರಿತ್ಯ ಗಳಾದ ಅಧಿಕ ಮಳೆ, ನೆರೆಯಿಂದ ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಗೆ ನಿರೀಕ್ಷಿತ ಇಳುವರಿಯು, ಪ್ರಾರಂಭಿಕ ಇಳುವರಿಯ ಶೇ.50ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡುಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ.25ರಷ್ಟು ಬೆಳೆ ನಷ್ಟ ಪರಿಹಾರ ರೂಪದಲ್ಲಿ ದೊರೆಯಲಿದೆ.

ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆಯಿಂದ ಬೆಳೆಹಾನಿಯಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದ್ದು, ಅಧಿಸೂಚಿಸಿದ ಘಟಕದಲ್ಲಿ ಶೇ. 25ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆ ನಷ್ಟವಾದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ ದೊರೆಯಲಿದೆ.

ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ರಷ್ಟು ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25ರಷ್ಟು ಪರಿಹಾರ ವಿಮೆ ಮಾಡಿಸಿದ ರೈತರಿಗೆ ದೊರಕಲಿದೆ.

ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News