×
Ad

ಉಡುಪಿ ಜಿಲ್ಲೆಯ ಎಲ್ಲಾ ಬೀಚ್‌ಗಳಿಗೂ ಬ್ಲ್ಲೂಪ್ಲಾಗ್ ಮಾನ್ಯತೆಗೆ ಯತ್ನಿಸಿ: ಡಿಸಿ

Update: 2019-11-21 20:54 IST

ಉಡುಪಿ, ನ.21: ಜಿಲ್ಲೆಯಲ್ಲಿರುವ ಎಲ್ಲಾ ಬೀಚ್‌ಗಳಿಗೂ ಬ್ಲ್ಲೂಪ್ಲಾಗ್ ಮಾನ್ಯತೆ ದೊರೆಯುವ ರೀತಿಯಲ್ಲಿ ಬೀಚ್‌ಗಳನ್ನು ಅಭಿವೃದ್ಧಿ ಪಡಿಸುವಂತೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈಗಾಗಲೇ ಜಿಲ್ಲೆಯಲ್ಲಿ ಬ್ಲ್ಲೂಪ್ಲಾಗ್ ಮಾನ್ಯತೆ ಪಡೆದಿರುವ ಬೀಚ್‌ಗಳ ಸೌಲಭ್ಯಗಳನ್ನು ಗುರುತಿಸಿ, ಇತರೆ ಬೀಚ್‌ಗಳಲ್ಲಿ ಸಹ ಆ ಸೌಲಭ್ಯ ಗಳನ್ನು ಅಳವಡಿಸಿ. ಜಿಲ್ಲೆಯ ಎಲ್ಲಾ ಬೀಚ್‌ಗಳೂ ಹಂತ ಹಂತವಾಗಿ ಬ್ಲ್ಲೂಪ್ಲಾಗ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖ ರಾಗುವಂತೆ ಸೂಚಿಸಿದ ಡಿಸಿ, ಬ್ಲ್ಲೂಪ್ಲಾಗ್ ಪಡೆದಿರುವ ಬೀಚ್‌ನಲ್ಲಿರುವ ಸೌಲ್ಯಗಳು ಮತ್ತು ಪಡೆಯದೆ ಇರುವ ಬೀಚ್‌ಗಳಲ್ಲಿರುವ ಬ್ಲ್ಲೂಪ್ಲಾಗ್ ಸರ್ಟಿಫಿಕೇಶನ್ ಗೈಡ್‌ಲೈನ್ಸ್‌ನ ಕೊರತೆಗಳ ಕುರಿತು ಕಾಲೇಜು ವಿದ್ಯಾರ್ಥಿಗಳ ಮೂಲಕ ಸರ್ವೆ ನಡೆಸುವಂತೆ ಜಿ.ಜಗದೀಶ್ ಸೂಚಿಸಿದರು.

ಬ್ಲ್ಲೂಪ್ಲಾಗ್ ಸರ್ಟಿಫಿಕೇಷನ್ ಪಡೆದಿರುವ ಬೀಚ್‌ಗೆ ಸಂಬಂಧಿಸಿದಂತೆ ಮಾಸ್ಟರ್‌ಪ್ಲಾನ್‌ತಯಾರಿಸಿ ಸಿಝಡ್‌ಎಂಎ ಮ್ಯಾಪ್‌ ನೊಂದಿಗೆ ಸಿಆರ್‌ಝಡ್ ಕ್ಲಿಯರೆನ್ಸ್‌ಗೆ ಸಲ್ಲಿಸುವ ಕುರಿತಂತೆ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲಿ ಸಲ್ಲಿಸಿ. ಈ ಬಗ್ಗೆ ನವೆಂಬರ್ ಅಂತ್ಯದಲ್ಲಿ ಸಭೆ ನಡೆಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಮಲ್ಪೆ ಸೀ ವಾಕ್ ಪ್ರದೇಶದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಮೂಲೂತ ಸೌಕರ್ಯ ಒದಗಿಸಲು ತಯಾರಿಸಿರುವ ಅಂದಾಜು ಪಟ್ಟಿ ಯಲ್ಲಿ ಕಾಮಗಾರಿ ಗಳನ್ನು ಮಲ್ಪೆ ಅಭಿವೃದ್ದಿ ಸಮಿತಿ ಮೂಲಕ ಕೈಗೊಳ್ಳುವಂತೆ ಮತ್ತು ಸಮೀಪದ ಲ್ಲಿರುವ ಬಂದರು ಇಲಾಖೆಯ ಜಾಗವನ್ನು ಲೀಸ್ ಮೇಲೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿ ಬೋಟ್‌ಗಳಿಗೆ ಅನುಮತಿ ಪಡೆದವರು, ನಿಯಮ ಮೀರಿ ಪ್ರವಾಸಿಗರನ್ನು ಕರೆದೊಯ್ಯುವ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಈಗಾಗಲೇ ಒಂದು ಬೋಟ್‌ನವರಿಗೆ ನೋಟಿಸ್ ನೀಡಿದ್ದು, ಅವರಿಗೆ ನೀಡಲಾಗಿರುವ ಅನುಮತಿ ಯನ್ನು ರದ್ದುಪಡಿಸುವಂತೆ ಪೌರಾಯುಕ್ತ ರಿಗೆ ಸೂಚಿಸಿದರು. ಸಾರ್ವಜನಿಕರ ಸುರಕ್ಷತಾ ದೃಷ್ಠಿಯಿಂದ ರಚಿಸಿರುವ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಬೋಟ್ ಮಾಲಕರ ಜವಾಬ್ದಾರಿ ಎಂದವರು ನುಡಿದರು.

ಕುಂದಾಪುರ ತಾಲೂಕಿನ ಪಂಚಗಂಗಾವಳಿ ಸಂಪರ್ಕದ ಬಬ್ಬುಕುದ್ರು ಪ್ರದೇಶ ವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಛಿ ಪಡಿಸುವ ಕುರಿತು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸ್ಥಳ ಪರಿಶೀಲನೆ ನಡೆಸಿ, ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವಂತೆ ನಿರ್ಮಿತಿ ಕೆೀಂದ್ರದ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಸ್ವದೇಶ ದರ್ಶನ ಯೋಜನೆ ಯಡಿಯಲ್ಲಿ ಜಿಲ್ಲೆಯ ಕುಂಜಾರುಗಿರಿಯ ಶ್ರೀಮದ್ವಾ ಚಾರ್ಯ ಪ್ರತಿಮೆಯ ಬಳಿ ಪ್ರವಾಸಿ ಸೌಲ್ಯ ಅಭಿವೃದ್ಧಿ ಪಡಿಸುವ ಬಗೆಗಿನ ಪ್ರಸ್ತಾವನೆಗೆ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರವಾಸಿ ಗೈಡ್‌ಗಳ ನೇಮಕ ಮಾಡುವ ನಿಟ್ಟಿನಲ್ಲಿ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಆಸಕ್ತ ಯುವಕರನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬೀಚ್‌ಗಳಲ್ಲಿ ಪ್ರತಿ ವಾರಾಂತ್ಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರವಾಸಿರನ್ನು ಆಕರ್ಷಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News