ಭೀಮಸೂರ್ಯ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

Update: 2019-11-21 16:23 GMT

ಮಂಗಳೂರು, ನ.21: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿಗಾಗಿ ಸಂಘರ್ಷ ನಡೆಸದಿದ್ದರೆ ಉನ್ನತಿ ಹೊಂದಲು ಸಾಧ್ಯವಿಲ್ಲ. ಅದೇ ರೀತಿ ತಾನು ನಡೆದುಬಂದ ಹಾದಿಯನ್ನು ಮೆಲುಕು ಹಾಕಿ ಇತರರಿಗೆ ಮಾದರಿಯಾಗುವವನೇ ನಿಜವಾದ ನಾಯಕನಾಗುತ್ತಾನೆ ಎಂದು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ.ಎ. ಚಂದ್ರಕುಮಾರ್ ತಿಳಿಸಿದ್ದಾರೆ.

ನಗರದ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಭೀಮಸೂರ್ಯ ಚಾರಿಟೇಬಲ್ ಟ್ರಸ್ಟ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಸಾಧಕನ ಹಿಂದೆ ಅವಿರತ ಶ್ರಮ ಇರುತ್ತದೆ. ಅದೆಷ್ಟೋ ಹೋರಾಟ, ಸಂಘರ್ಷಗಳು ನಡೆದಿರುತ್ತವೆ. ತಾನು ಸಾಧಕನಾದಾಗ ತನ್ನ ಸಮಾಜವನ್ನು ಬೆಳೆಸಿ ಮುನ್ನಡೆಸಲು ಮುಂದಾದಾಗ ಮಾತ್ರ ಅಂಥಹ ಸಾಧನೆಗೆ ಒಂದು ಅರ್ಥ ಬರುತ್ತದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದ ನಾಗರಿಕರು ಮೂಲಭೂತ ಸೌಕರ್ಯ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆ್ಯಪ್ ಮೂಲಕ ತಂತ್ರಜ್ಞಾನದ ಸ್ಪರ್ಶ ನೀಡುವ ಉದ್ದೇಶ ಹೊಂದಲಾಗಿದೆ. ಡಿಸೆಂಬರ್ ತಿಂಗಳ ಅಂತ್ಯದೊಳಗೆ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೊಂದವರ ಕಣ್ಣೀರು ಒರೆಸಲು ಮುಂದಾಗಿರುವ ಟ್ರಸ್ಟ್‌ಗೆ ಭೀಮನ ಬಲ, ಸೂರ್ಯನ ಪ್ರಕಾಶ ಸ್ಪರ್ಶಿಸಬೇಕು ಎಂದು ಭೀಮಸೂರ್ಯ ಚಾರಿಟೇಬಲ್ ಟ್ರಸ್ಟ್‌ಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಅಶೋಕ್ ಕೊಂಚಾಡಿ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಡಾ.ವಾಸುದೇವ ಬೆಳ್ಳೆ, ನ್ಯಾಯವಾದಿ ಮೋಹನ್‌ದಾಸ್ ರೈ, ಮುಗೇರ ಸಂಘದ ತಾಲೂಕು ಅಧ್ಯಕ್ಷ ಸೀತಾರಾಮ ಕೊಂಚಾಡಿ, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರಘುರಾಜ್ ಕದ್ರಿ, ಪಂಬದರ ಯಾನೆ ದೈವಾದಿಗರ ಸಮಾಜ ಸಂಘದ ಅಧ್ಯಕ್ಷ ಭಾಸ್ಕರ ಬಂಗೇರ, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹರೀಶ್ವಂದ್ರ ಕೆ., ಜಪ್ಪು ವಾರ್ಡ್‌ನ ನೂತನ ಮನಪಾ ಸದಸ್ಯ ಭರತ್‌ಕುಮಾರ್ ಎಸ್., ನ್ಯಾಯವಾದಿ ಶೈನ್‌ಕುಮಾರ್, ಕದ್ರಿ ವಾರ್ಡ್‌ನ ಮನಪಾ ಸದಸ್ಯ ಮನೋಹರ್ ಶೆಟ್ಟಿ, ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಎಸ್.ಸೋಮಶೇಖರ್, ಎಸ್ಸಿ-ಎಸ್ಟಿ ನಾಗರಿಕರ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಚಂದ್ರಕುಮಾರ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸದಸ್ಯ ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News