ಕಾರ್ಪೊರೇಟರ್ ನವೀನ್ ಡಿಸೋಜಗೆ ಸನ್ಮಾನ
ಮಂಗಳೂರು, ನ.21: ಮಂಗಳೂರು ಮಹಾನಗರ ಪಾಲಿಕೆಯ ನೂತನ ಕಾರ್ಪೊರೇಟರ್ ಆಗಿ ಆಯ್ಕೆಯಾದ ನವೀನ್ ಡಿಸೋಜ ಅವರನ್ನು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ ಹಾಗೂ ಎಸ್ಕೆಎಸ್ಎಂ ಕಂಕನಾಡಿ ಘಟಕದ ವತಿಯಿಂದ ಗುರುವಾರ ಕಂಕನಾಡಿಯ ಎಸ್ಕೆಎಸ್ಎಂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಮಾತನಾಡಿ ನವೀನ್ ಡಿಸೋಜರು ಕಂಕನಾಡಿಯ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಕಂಕನಾಡಿಯಲ್ಲಿ ಸುಸಜ್ಜಿತ ಮಾರುಕಟ್ಟೆ ತಲೆ ಎತ್ತಲಿದೆ ಎಂದರು.
ಸನ್ಮಾನ ಸ್ವೀಕರಿಸಿದ ನವೀನ್ ಡಿಸೋಜ ಮಾತನಾಡಿ ಈ ಭಾಗದ ಸರ್ವತ್ತೋಮುಖ ಅಭಿವೃದ್ಧಿಗೆ ನಾನು ಮುಂದೆಯೂ ಶ್ರಮಿಸುವೆ. ಇನ್ನೂ ಅನೇಕ ಯೋಜನೆಗಳು ಬಾಕಿ ಇವೆ. ಅವುಗಳನ್ನು ಕಾರ್ಯಗತಗೊಳಿಸುವೆ. ಅಲ್ಲದೆ ಮೂರು ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವೆ ಎಂದರು.
ಸಭೆಯಲ್ಲಿ ಎಸ್ಕೆಎಸ್ಎಂ ಕೇಂದ್ರ ಸಮಿತಿಯ ಕಾರ್ಯದರ್ಶಿ ಎಂಜಿ ಮುಹಮ್ಮದ್, ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್, ಮಾರುಕಟ್ಟೆ ವರ್ತಕರ ಸಂಘದ ಉಪಾಧ್ಯಕ್ಷೆ ಪ್ರೇಮಾ, ಕೋಶಾಧಿಕಾರಿ ಮುಹಮ್ಮದ್ ಶಾಲಿ, ಸದಸ್ಯೆ ಕ್ಲೇರಾ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೋ ಕಾರ್ಯಕ್ರಮ ನಿರೂಪಿಸಿದರು.