ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತಗೊಳಿಸಿ : ಸ್ಮಾರ್ಟ್‌ಸಿಟಿ ಅಂತರ್ ಇಲಾಖಾ ಸಭೆಯಲ್ಲಿ ಡಿಸಿ ಸಿಂಧೂ ಸೂಚನೆ

Update: 2019-11-21 17:14 GMT

ಮಂಗಳೂರು, ನ.21: ಸ್ಮಾರ್ಟ್‌ಸಿಟಿ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಸ್ಮಾರ್ಟ್‌ಸಿಟಿ ಅಂತರ್ ಇಲಾಖಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ನಗರದ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಖಾಸಗಿ ಭೂಮಾಲಕರ ತಕರಾರಿನಿಂದ ಅರ್ಧದಲ್ಲಿಯೇ ನಿಂತಿರುವುದಕ್ಕೆ ಹಾಗೂ ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಟಿಡಿಆರ್ ಅಡಿ ಜಾಗ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಸಮನ್ವಯದೊಂದಿಗೆ ವ್ಯವಹರಿಸಿ ಕಾಮಗಾರಿ ತ್ವರಿತಗೊಳಿಸಬೇಕು. ಕೇವಲ ಪತ್ರ ಬರೆದು, ಅನುಮತಿಗಾಗಿ ಕಾಯುವುದರಿಂದ ಯೋಜನೆ ವಿಳಂಬವಾಗಲು ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಮನೆ ಒದಗಿಸಲು ಶಕ್ತಿನಗರದಲ್ಲಿ ಗುರುತಿಸಲಾಗಿರುವ ಜಮೀನಿಗೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇರುವುದರಿಂದ ಈ ಬಗ್ಗೆ ಸಮಸ್ಯೆ ಸರಿಪಡಿಸಲು ಅಥವಾ ಪರ್ಯಾಯ ಜಮೀನು ಗುರುತಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದರು.
ಕುಡ್ಸೆಂಪ್ ವತಿಯಿಂದ ಕೈಗೊಳ್ಳಲಾಗುವ ಒಳಚರಂಡಿ ಕಾಮಗಾರಿಗಳನ್ನೂ ತ್ವರಿತಗತಿಯಲ್ಲಿ ನಡೆಸಲು ಅವರು ಕುಡ್ಸೆಂಪ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

‘ಏಕಮುಖ ರಸ್ತೆ ಪ್ರಸ್ತಾವ ಕೈಬಿಡುವ ಬಗ್ಗೆ ಪರಿಶೀಲನೆ’

ಮಂಗಳೂರು ನಗರದ ಕ್ಲಾಕ್‌ಟವರ್‌ನಿಂದ ಆರ್‌ಟಿಒ ಸರ್ಕಲ್‌ವರೆಗಿನ ರಸ್ತೆಯನ್ನು ಏಕಮುಖವಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಪೊಲೀಸ್ ಇಲಾಖೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಕಚೇರಿ ಸೇರಿದಂತೆ ಪ್ರಮುಖ ಸರಕಾರಿ ಕಚೇರಿಗಳು ಇರುವುದರಿಂದ ಹಾಗೂ ಆಗಿಂದಾಗ್ಗೆ ನೆಹರೂ ಮೈದಾನಕ್ಕೆ ವಿವಿಐಪಿಗಳ ಭೇಟಿ ಇರುವುದರಿಂದ ಈ ರಸ್ತೆಯನ್ನು ಏಕಮುಖವನ್ನಾಗಿ ಪರಿವರ್ತಿಸುವುದು ಸೂಕ್ತವಲ್ಲ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಿಸಿದೆ. ಈ ಪ್ರಸ್ತಾವವನ್ನು ಕೈಬಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News