ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಉಡುಪಿ, ನ.24: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವವು ರವಿವಾರ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಜರಗಿತು.
ಈ ಪ್ರಯುಕ್ತ ನಡೆದ ಪ್ರಧಾನ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಿ, ಯೇಸು ಸ್ವಾಮಿಯು ಈ ಜಗತ್ತಿಗೆ ಎಂದೂ ಕೂಡ ತನಗೆ ಸೇವೆಯನ್ನು ಬಯಸಿ ಬಂದಿಲ್ಲ. ಬದಲಾಗಿ ಸೇವೆಯನ್ನು ನೀಡಲು ಬಂದರು. ತನ್ನ ಸೇವಾ ಮನೋಭಾವದೊಂದಿಗೆ ತನ್ನನ್ನೇ ತಾನು ಶಿಲುಬೆಯಲ್ಲಿ ಸಮರ್ಪಿಸಿಕೊಂಡರು. ಯೇಸು ಸ್ವಾಮಿ ಈ ಭೂಮಿಯಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಲಿಲ್ಲ. ಅದರ ಬದಲು ನಮ್ಮ ಪಾಪಗಳಿಗೆ ಮುಕ್ತಿಯನ್ನು ನೀಡಿದರು. ಅದೇ ಯೇಸು ಸ್ವಾಮಿ ಆಶಿಸಿದ ಶಾಂತಿಯ ರಾಜ್ಯ ಸ್ಥಾಪನೆಗೆ ಪ್ರತಿಯೊಬ್ಬರು ಸದಾ ಕಟಿಬದ್ಧರಾಗಿರಬೇಕು ಎಂದರು.
ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನ ದಲ್ಲಿ ಮಿಲಾಗ್ರಿಸ್ ಕ್ಯಾಥೆಡ್ರಲ್ನಿಂದ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ವರೆಗೆ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಬಹಿರಂಗ ಗೌರವ ಸಲ್ಲಿಸಲಾಯಿತು.
ಮೌಂಟ್ ರೋಸರಿ ಚರ್ಚಿಗೆ ತಲುಪಿದ ಬಳಿಕ ಅತ್ತೂರು ಸಂತ ಲಾರೆನ್ಸರ ಬೆಸಿಲಿಕಾದ ಸಹಾಯಕ ಧರ್ಮಗುರು ವಂ.ಮೆಲ್ವಿಲ್ ರೋಯ್ ಲೋಬೊ ಪ್ರವಚನ ನೀಡಿ, ಪರಮ ಪ್ರಸಾದವು ಏಕತೆ, ತ್ಯಾಗ ಹಾಗೂ ಕ್ಷಮೆಯ ಸಂಕೇತ ವಾಗಿದ್ದು, ನಿಜವಾದ ಪ್ರಿತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಅಡಗಿದೆ. ಅದನ್ನು ಯೇಸು ಸ್ವಾಮಿಯು ಶಿಲುಬೆಗೇರುವ ಮೂಲಕ ನಮಗೆ ೋರಿಸಿಕೊಟಿದ್ದಾರೆ ಎಂದು ಹೇಳಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಕುಲಪತಿ ವಂ.ಸ್ಟ್ಯಾನಿ ಬಿ.ಲೋಬೊ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ.ಜೊಸ್ವಿ ಫೆರ್ನಾಂಡಿಸ್, ಉಡುಪಿ ವಲಯ ಪ್ರಧಾನ ಧರ್ಮ ಗುರು ವಂ. ವಲೇರಿಯನ್ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ.ಲೆಸ್ಲಿ ಡಿಸೋಜ, ಮಿಲಾಗ್ರಿಸ್ ಕ್ಯಾಥೆಡ್ರಲ್ನ ಸಹಾಯಕ ಧರ್ಮಗುರು ವಂ.ಕೆನ್ಯೂಟ್ ನೊರೊನ್ಹಾ, ಅತ್ತೂರು ಸಂತ ಲಾರೆನ್ಸ್ ಬಾಸಿಲಿಕದ ವಂ.ಜೋರ್ಜ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ 52 ಚರ್ಚ್ಗಳಿಂದ ಸುಮಾರು 2500 ಕ್ಕೂ ಅಧಿಕ ಮಂದಿ ಭಕ್ತಾದಿಗಳು, 45ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ಸೆನೆಟ್ ಸಭೆಯ ಕಾರ್ಯದರ್ಶಿ ವಂ.ಅನಿಲ್ ಪ್ರಕಾಶ್ ವಂದಿಸಿದರು.
ಮನೆ ನಿರ್ಮಿಸುವ ವಿಶೇಷ ಯೋಜನೆ
ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮುಂದಿನ 2020ರ ವರ್ಷದಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಅದರಂತೆ ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಚರ್ಚ್ಗಳಲ್ಲಿ ನಿವೇಶನ ಹೊಂದಿ ಮನೆ ನಿರ್ಮಿಸಲು ಸಾಧ್ಯವಾಗದ ಬಡ ಕುಟುಂಬ ಗಳಿಗೆ ಮನೆ ನಿರ್ಮಿಸಿಕೊಡುವ ವಿಶೇಷ ಯೋಜನೆಯನ್ನು ಇಡೀ ಒಂದು ವರ್ಷ ನಿರಂತರವಾಗಿ ನಡೆಸಲಾಗುವುದು. ಇದರ ನೇತೃತ್ವವನ್ನು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ವಹಿಸಲಿದೆ.