'8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಜನಪ್ರತಿನಿಧಿಗಳು ಶ್ರಮಿಸಲಿ'
ಮಂಗಳೂರು, ನ.24: ರಾಜ್ಯದ ಎಲ್ಲ ಶಾಸಕರ ಅನುಮೋದನೆ ಪಡೆದು ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಶ್ರಮಿಸಬೇಕು ಎಂದು ತುಳು ಅಕಾಡಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮನವಿ ಮಾಡಿದ್ದಾರೆ.
ನಗರದ ತುಳುಭವನದಲ್ಲಿ ರವಿವಾರ ಅಕಾಡಮಿಯ ಸರ್ವ ಸದಸ್ಯರೊಂದಿಗೆ ಅಧಿಕಾರ ಸ್ವೀಕಾರ ಮಾಡಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲೂ ಒಂದೇ ಪಕ್ಷದ ಸರಕಾರ ಇರುವುದರಿಂದ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು ಇನ್ನಷ್ಟು ಸುಲಭವಾಗಿದೆ. ಈ ನಿಟ್ಟಿನಲ್ಲಿ ಅಕಾಡಮಿ ಅಧ್ಯಕ್ಷನಾಗಿ ತಾನೂ ಪ್ರಯತ್ನ ನಡೆಸುತ್ತೇನೆ. ಲಿಪಿ, ಕ್ಯಾಲೆಂಡರ್ ಎರಡೂ ಇರುವ ತುಳು ಭಾಷೆಗೆ ಈ ಸ್ಥಾನಮಾನ ಸಿಗುವುದು ಅರ್ಹವೇ ಆಗಿದೆ ಎಂದರು.
ಇನ್ನೊಂದು ವರ್ಷದೊಳಗೆ ರಾಷ್ಟ್ರಾದ್ಯಂತ ಜನಗಣತಿ ಆರಂಭವಾಗಲಿದೆ. ಈ ಸಂದರ್ಭ ತುಳುನಾಡಿನ ಎಲ್ಲ ವರ್ಗ, ಧರ್ಮಗಳ ಜನತೆ ತಮ್ಮ ವ್ಯಾವಹಾರಿಕ ಭಾಷೆ ‘ತುಳು’ ಎಂಬುದಾಗಿ ನಮೂದಿಸುವಂತೆ ಅವರು ಮನವಿ ಮಾಡಿದರು.
ಜಮ್ಮು-ಕಾಶ್ಮೀರ ಸೇರಿದಂತೆ ದೇಶ ವಿವಿಧೆಡೆ ತೆರಳಿದರೆ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸುವಂತೆಯೇ ದೇಶ, ವಿದೇಶಗಳ ಪ್ರವಾಸಿಗರು ತುಳುನಾಡಿಗೆ ಬರುವಾಗ ಇಲ್ಲಿನ ಉಡುಗೆ ತೊಟ್ಟು ಸಂಭ್ರಮಿಸುವಂತಾಗಬೇಕು. ಅದಕ್ಕಾಗಿ ಬಸ್ಸು, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮುಟ್ಟಾಳೆ, ಕೊರಂಬು ಇತ್ಯಾದಿಗಳನ್ನೊಳಗೊಂಡಂತೆ ಸಾಂಪ್ರದಾಯಿಕ ಉಡುಗೆಗಳುಳ್ಳ ಕೌಂಟರ್ ತೆರೆಯಲಾಗುವುದು ಎಂದು ತುಳು ಅಕಾಡಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಪ್ರಕಟಿಸಿದರು.
ಶಾಸಕ ರಾಜೇಶ್ ನಾಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮಾಜಿ ಅಧ್ಯಕ್ಷ ವಾಮನ ನಂದಾವರ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಕಾಡಮಿಯ ನೂತನ ಸದಸ್ಯರು ಇದ್ದರು. ಕಳೆದ ಅವಧಿಯಲ್ಲಿ ಪ್ರಕಟಿಸಿದ ಏಳು ಪುಸ್ತಕಗಳನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಮುಖ್ಯಮಂತ್ರಿಯಾದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಹಿಂದೆ ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಅವರು ಸಿಎಂ ಆಗಿದ್ದಾರೆ. ಮುಂದಿನ ಉಪಚುನಾವಣೆ ಬಳಿಕ ತಮ್ಮ ಮಾತು ಈಡೇರಿಸುತ್ತಾರೆ ಎನ್ನುವ ನಂಬಿಕೆಯಿದೆ.
-ದಯಾನಂದ ಕತ್ತಲ್ಸಾರ್,
ತುಳು ಅಕಾಡಮಿಯ ನೂತನ ಅಧ್ಯಕ್ಷ
ತುಳುಭವನ ಕಾಮಗಾರಿ ಶೇ.40ರಷ್ಟು ಬಾಕಿ ಉಳಿದಿದ್ದು, ಇನ್ನೂ 3-4 ಕೋಟಿ ರು. ಅನುದಾನದ ಅಗತ್ಯವಿದೆ. ಅದರ ಬಿಡುಗಡೆಗೆ ಪ್ರಯತ್ನಿಸಲಾಗುವುದು.
-ಉಮಾನಾಥ ಕೋಟ್ಯಾನ್, ಶಾಸಕ