ಪಡುಬಿದ್ರೆ : ಬಸ್ಸು-ಕಾರು ಢಿಕ್ಕಿ; ಯುವತಿ ಮೃತ್ಯು, ಮೂವರಿಗೆ ಗಾಯ

Update: 2019-11-25 15:54 GMT

ಪಡುಬಿದ್ರೆ : ಕಾರು ಡಿವೈಡರ್ ಹಾರಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಜೆ ಇಲ್ಲಿನ ಬೀಡು ಬಳಿ ನಡೆದಿದೆ.

ಮೃತ ಯುವತಿಯನ್ನು ಮಂಗಳೂರು ಕುಪ್ಪೆ ಪದವು ಮೂಲದ ನಿಕ್ಷಿತಾ (21) ಎಂದು ಗುರುತಿಸಲಾಗಿದೆ.

ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ವಾಮಂಜೂರು ನಿವಾಸಿ ಗುರುಕಿರಣ್ ತೀವ್ರ ಗಾಯಗೊಂಡಿದ್ದು, ಮುಲ್ಕಿ ಕಿಲ್ಪಾಡಿ ಗೇರುಕಟ್ಟೆ ಅಮೃತಾನಂದ ನಗರದ ರಮಾನಂದ ಎಂಬವರ ಪುತ್ರ ಧನುಷ್ (23), ಮುಲ್ಕಿ ಬಪ್ಪನಾಡಿನ ಆಲಿತೋಟ ನಿವಾಸಿ ಸುರೇಶ್ ದೇವಾಡಿಗ ಎಂಬವರ ಪುತ್ರಿ ಮೆಡಲಿನ್ ಪ. ಪೂ. ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿನಿ ಹರ್ಷಿಣಿ (17) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಅತೀವ ವೇಗದಿಂದ ಮುಲ್ಕಿ ಕಡೆಯಿಂದ ಉಡುಪಿಯತ್ತ ಸಂಚರಿಸುತಿದ್ದು, ಪಡುಬಿದ್ರಿ ಬೀಡು ಬಳಿವಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿಂದ ಹಾರಿ ಉಡುಪಿ ಕಡೆಯಿಂದ ಸಂಚರಿಸುತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಬಸ್ಸುಗಳ ಮುಂಭಾಗ ಜಖಂಗೊಂಡಿದೆ. ನಿಕ್ಷಿತಾಳ ದೇಹವನ್ನು ಹೊರತೆಗೆಯಲು ಸಾರ್ವಜನಿಕರು ಸುಮಾರು ಅರ್ಧ ತಾಸು ಶ್ರಮಿಸಿದ್ದರು.  ಸ್ಥಳಕ್ಕೆ ಬಂದ ಪೊಲೀಸರು ಅಪಘಾತವಾದ ವಾಹನವನ್ನು ತೆರವುಗೊಳಿಸಿ ಸಾರ್ವಜನಿಕರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News