ಲಂಕಾ: ಅಧಿಕಾರಿಗಳ ಪರಾರಿ ತಪ್ಪಿಸಲು ವಿಮಾನ ನಿಲ್ದಾಣಗಳಲ್ಲಿ ಜಾಗೃತಿ
Update: 2019-11-26 15:50 GMT
ಕೊಲಂಬೊ, ನ. 26: ಶ್ರೀಲಂಕಾದ ಪೊಲೀಸ್ ಅಧಿಕಾರಿಗಳು ಅನುಮತಿಯಿಲ್ಲದೆ ದೇಶ ತೊರೆಯುವುದನ್ನು ತಡೆಯಲು ಆ ದೇಶದ ಸರಕಾರವು ದೇಶದ ವಿಮಾನ ನಿಲ್ದಾಣಗಳನ್ನು ಜಾಗೃತ ಸ್ಥಿತಿಯಲ್ಲಿರಿಸಿದೆ.
ನೂತನ ಸರಕಾರ ಬಂದ ಬಳಿಕ, ಪ್ರಾಣ ಬೆದರಿಕೆ ಕರೆಗಳನ್ನು ಸ್ವೀಕರಿಸಿದರೆನ್ನಲಾದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ದೇಶದಿಂದ ಪರಾರಿಯಾದ ಬಳಿಕ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಇನ್ಸ್ಪೆಕ್ಟರ್ ನಿಶಾಂತ ಸಿಲ್ವ ಹಾಲಿ ಅಧ್ಯಕ್ಷ ಗೋತಬಯ ರಾಜಪಕ್ಸ ವಿರುದ್ಧ ತನಿಖೆ ನಡೆಸಿದ್ದರು ಹಾಗೂ ನವೆಂಬರ್ 16ರಂದು ಗೋತಬಯ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯಾದ ಬಳಿಕ ಪ್ರಾಣ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದರು ಎನ್ನಲಾಗಿದೆ.
ಕ್ರಿಮಿನಲ್ ಇನ್ವೆಸ್ಟಿಗೇಶನ್ ವಿಭಾಗ (ಸಿಐಡಿ)ದ 704 ಅಧಿಕಾರಿಗಳ ಹೆಸರುಗಳನ್ನು ವಲಸೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಸೇಕರ ತಿಳಿಸಿದರು.