ಕೆಸಿಸಿ ಆರೋಗ್ಯ ಕಾರ್ಡ್ ವಿರುದ್ಧದ ಆರೋಪ ನಿರಾಧಾರ : ಟ್ರಸ್ಟ್ ರಾಜ್ಯ ಉಸ್ತುವಾರಿ
ಕಡಬ, ನ.27: ಕೆಸಿಸಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೀಡಲಾಗುವ ಕೆಸಿಸಿ ಆರೋಗ್ಯ ಕಾರ್ಡ್ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ ಚಾರಿಟೇಬಲ್ ಟ್ರಸ್ಟ್ನ ರಾಜ್ಯ ಉಸ್ತುವಾರಿ ಅಧಿಕಾರಿಯೋರ್ವರು ಮಂಗಳವಾರ ಕಡಬ ಠಾಣೆಗೆ ತೆರಳಿ ಚಿಕಿತ್ಸೆ ಪಡೆದ ಫಲಾನುಭವಿಗಳ ದಾಖಲೆ ಸಹಿತ ವಿವರವನ್ನು ನೀಡಿ ಸಂಸ್ಥೆಯ ಮೇಲೆ ಮಾಡಲಾದ ಆರೋಪ ನಿರಾಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಸಿಸಿ ಚಾರಿಟೇಬಲ್ ಟ್ರಸ್ಟ್ ಕಳೆದ ಐದು ವರ್ಷಗಳಿಂದ ಸಮಾಜದ ಎಲ್ಲಾ ವರ್ಗಗಳ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಸಂಸ್ಥೆಯ ಮೂಲಕ ಬಡಜನರಿಗೆ ಕೆಸಿಸಿ ಆರೋಗ್ಯ ಕಾರ್ಡುಗಳನ್ನು ನೀಡಿ ಸಾವಿರಾರು ರೋಗಿಗಳಿಗೆ ಉಚಿತ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈಗಾಗಲೇ ಸಾವಿರಾರು ಮಂದಿ ಚಿಕಿತ್ಸೆ ಪಡೆದಿರುವುದಾಗಿ ಸಂಸ್ಥೆಯ ಸಿಇಒ ಅಬ್ದುಲ್ ನಾಸಿರ್ ಅವರು ಕಡಬ ಠಾಣೆಗೆ ತೆರಳಿ ವಿವರಣೆ ನೀಡಿದ್ದು, ಸಂಸ್ಥೆಯ ಕುರಿತು ಈ ಹಿಂದೆ ಮಾಡಲಾದ ಆರೋಪಗಳು ನಿರಾಧಾರವಾಗಿದೆ ಎಂದು ಸ್ಪಷ್ಟಪಡಿಸಿರುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.