ವೆನ್ಲಾಕ್ ತುರ್ತು ದುರಸ್ಥಿಗಳನ್ನು ತ್ವರಿತಗೊಳಿಸಲು ಡಿಸಿ ಸೂಚನೆ
ಮಂಗಳೂರು, ನ.30: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಬಾಕಿ ಉಳಿದಿರುವ ತುರ್ತು ದುರಸ್ಥಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ನೀರಿನ ಓವರ್ ಹೆಡ್ ಟ್ಯಾಂಕ್ನ ಸಾಮರ್ಥ್ಯವನ್ನು ಶೀಘ್ರ ಪರಿಶೀಲಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಅಗತ್ಯವಾದ 2 ಟನ್ ಎಸಿ ಉಪಕರಣವನ್ನು ಆಸ್ಪತ್ರೆಯ ಇಂಜಿನಿಯರಿಂಗ್ ವಿಂಗ್ನಿಂದ ಪಡೆದು ತಕ್ಷಣ ಅಳವಡಿಸಬೇಕು ಎಂದ ಡಿಸಿ ಆಸ್ಪತ್ರೆಯ ರೋಗಿಗಳಿಗೆ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳನ್ನು ಟೆಂಡರ್ ಆಹ್ವಾನಿಸಲು ಅನುಮತಿ ನೀಡಿದರು.
ಆಸ್ಪತ್ರೆಯ ರಕ್ತನಿಧಿ ವಿಭಾಗ ಮತ್ತು ನೇತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಇತರ ಕಾರ್ಯಕ್ರಮಗಳಿಗೆ ಅತೀ ಅಗತ್ಯವಾಗಿ ಬೇಕಾದ 25 ಸೀಟ್ಗಳ ಹವಾನಿಯಂತ್ರಿತ ಬಸ್ಸಿನ ಖರೀದಿಗಾಗಿ ಮೆಸ್ಕಾಂ ನೀಡಿರುವ ದೇಣಿಗೆಯ ಹಣದಿಂದ ಟೆಂಡರ್ ಮೂಲಕ ಖರೀದಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ರಾಜೇಶ್ವರಿ ದೇವಿ ಮಾಹಿತಿ ನೀಡಿದರು.
ಸಭೆಯಲ್ಲಿ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಸವಿತಾ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್, ಕೆಎಂಸಿ ಆಸ್ಪತ್ರೆಯ ಡೀನ್, ಮೆಸ್ಕಾಂ ಪ್ರತಿನಿಧಿಗಳು, ವೆನ್ಲಾಕ್ ಆಸ್ಪತ್ರೆಯ ಆರ್ಎಂಒ ಡಾ. ಜೂಲಿಯಾನ ಸಲ್ಡಾನ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಆಸ್ಪತ್ರೆಯಲ್ಲಿ 1959 ರಿಂದ 1962ರವರೆಗೆ ಫಸ್ಟ್ ಲೀಡರ್/ಶಸ್ತ್ರ ಚಿಕಿತ್ಸಕರಾಗಿ ಕರ್ತವ್ಯ ನಿರ್ವಸಿದ ದಿ. ಡಾ.ಎಚ್ ಶ್ರೀನಿವಾಸನ್ 90ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ವೆನ್ಲಾಕ್ ಆಸ್ಪತ್ರೆ ಟ್ರಾಮಾ ವಾರ್ಡ್ಗೆ ಅವರ ಹೆಸರನ್ನು ಇಡಲು ಆರೋಗ್ಯ ರಕ್ಷಾ ಸಮಿತಿಯು ಜಿಲ್ಲಾಧಿಕಾರಿಯ ಅನುಮತಿ ಪಡೆದುಕೊಂಡಿತು.