ಡಿ.5ರಂದು ಕಟ್ಟಡ ಕಾರ್ಮಿಕರಿಂದ ಡೆಲ್ಲಿ ಚಲೋ
ಉಡುಪಿ, ಡಿ.2: ಕಟ್ಟಡ ಕಾರ್ಮಿಕರ ಕಾನೂನು ತಿದ್ದುಪಡಿ ವಿರೋಧಿಸಿ ಕಟ್ಟಡ ಕಾರ್ಮಿಕರು ಡಿ.5ರಂದು ಡೆಲ್ಲಿ ಚಲೋ ನಡೆಸಿ ಸಂಸತ್ತಿನ ಎದುರು ಧರಣಿ ನಡೆಸಲಿದ್ದು, ಇದರಲ್ಲಿ ಉಡುಪಿ ಜಿಲ್ಲೆಯಿಂದ ನೂರಾರು ಮಂದಿ ಕಾರ್ಮಿಕರು ಭಾಗವಹಿಸಲಿದ್ದಾರೆ.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಇಂದು 12 ಬಗೆಯ ಸವಲತ್ತುಗಳು ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸರಕಾರವು ಇಂದು ಈ ಸವಲತ್ತುಗಳನ್ನು ಅಸಂಘಟಿತ ಕಾರ್ಮಿಕರ ಕಾನೂನು ಜೊತೆ ವಿಲೀನ ಮಾಡಲು ಹೊರಟಿದೆ. ಇದು ಜಾರಿಯಾದರೆ ಕಟ್ಟಡ ಕಾರ್ಮಿಕರ ಗುರುತು ಪತ್ರಗಳು ರದ್ದಾಗಲಿವೆ ಮತ್ತು ಸೌಲಭ್ಯಗಳು ಕಡಿತವಾಗಲಿದೆ. ಕಲ್ಯಾಣ ಮಂಡಳಿಯಲ್ಲಿರುವ 8218 ಕೋಟಿ ಹಣ ಕೇಂದ್ರ ಸರಕಾರ ಕೈವಶ ಮಾಡಿಕೊಳ್ಳ ಲಿದೆ. ಕೇಂದ್ರ ಮಂತ್ರಿ ಮಂಡಲದಲ್ಲಿ ಈಗಾಗಲೇ ಈ ಕಾನೂನು ತಿದ್ದುಪಡಿಗೆ ಅನುಮೋದನೆ ಪಡೆದಿದ್ದು, ಮುಂದೆ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಯಾಗಲಿದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಸಂಚಾಲಕರಾದ ಸುರೇಶ್ ಕಲ್ಲಾಗರ ಹಾಗೂ ಶೇಖರ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.