ಡಾ. ಬಿ.ಅಹ್ಮದ್ ಹಾಜಿ ಕುರಿತ ‘ಅಬ್ಬಾ’ ಪುಸ್ತಕ ಬಿಡುಗಡೆ, ಸಾಕ್ಷ್ಯಚಿತ್ರ ಅನಾವರಣ

Update: 2019-12-04 12:11 GMT

ಬಂಟ್ವಾಳ, ಡಿ.೪: ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಜೀವನ ಸಾಧನೆ ತಿಳಿಸುವ 'ಅಬ್ಬಾ' (ಎ ಟ್ರಿಬ್ಯೂಟ್ ಫಾರ್ ಅವರ್ ಫಾದರ್) ಪುಸ್ತಕ ಬಿಡುಗಡೆ ಹಾಗೂ ಸಾಕ್ಷ್ಯಚಿತ್ರ ಅನಾವರಣ ಕಾರ್ಯಕ್ರಮ ಬುಧವಾರ ತುಂಬೆ ಬಿ.ಎ. ಕಾಲೇಜಿನ ಮೈದಾನದಲ್ಲಿ  ಅದ್ದೂರಿಯಾಗಿ ನಡೆಯಿತು.

ಶಿವಮೊಗ್ಗದ ಬಿಷಪ್ ಫಾದರ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. 'ಅಬ್ಬಾ' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಡಾ. ಬಿ.ಅಹ್ಮದ್ ಹಾಜಿ ಅವರ ಹಾದಿಯಲ್ಲೇ ಅವರ ಮಕ್ಕಳು ಕೂಡಾ ನಡೆಯುತ್ತಿದ್ದು, ಇವರೂ ಕೂಡಾ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸಿದರು.

ಕೈಗಾರಿಕೆ, ಶಿಕ್ಷಣ ಕ್ಷೇತ್ರ, ಪರೋಪಕಾರಿ ವ್ಯಕ್ತಿತ್ವ, ಸಾಮಾಜಿಕ ಮತ್ತು ಸಮುದಾಯ ಸೇವೆಗಳೇ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ಅಹ್ಮದ್ ಹಾಜಿ ಅವರು ಅಧ್ಯಕ್ಷರಾಗಿರುವ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬಿ.ಎ. ಕುಟುಂಬದ ಈ ಕಾರ್ಯ ಶ್ಲಾಘನೀಯ ಎಂದ ಅವರು, ಈ ಕಾರ್ಯಕ್ರಮಕ್ಕೆ ತಾನು ಬಹಳ ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದು, ತುಂಬಾ ಸಂತಸ ತಂದಿದೆ ಎಂದರು. 

ಇದೇ ಸಂದರ್ಭ ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರನ್ನು ಶಿವಮೊಗ್ಗದ ಬಿಷಪ್ ಫಾದರ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಸನ್ಮಾನಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು "ಅಬ್ಬಾ"  ಸಾಕ್ಷ್ಯಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಡಾ. ಅಹ್ಮದ್ ಹಾಜಿ, ಈ ಭಾಗದ ಬಹಳ ಜನಪ್ರೀಯ ಹೆಸರು. ಗ್ರಾಮೀಣದ ಜನರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡುವ ಮೂಲಕ ಆದರ್ಶ ವ್ಯಕ್ತಿಯಾಗಿರುವ ಇವರು, ನಮ್ಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಇನ್ನಷ್ಟು ಸಮಾಜಸೇವೆ ಮಾಡುವಂತಾಗಲಿ. ಅವರಿಗೆ ದೇವರು ದೀರ್ಘ ಕಾಲದ ಆರೋಗ್ಯ ನೀಡಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಎಲ್ಲ, ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ವ್ಯಕ್ತಿತ್ವ ಅಹ್ಮದ್ ಹಾಜಿ ಅವರದ್ದಾಗಿದ್ದು, ಅವರೊಬ್ಬ ಮಾನವತಾವಾದಿ. ಬಹಳಷ್ಟು ಸಮಾಜಸೇವೆ ಮಾಡಿರುವ ಇವರು ನಮ್ಮ ತಾಲೂಕಿನ ಹೆಮ್ಮೆ. ಅಹ್ಮದ್ ಹಾಜಿಯಂತಹ ಮನಸು ದೇವರು ಎಲ್ಲರಿಗೂ ನೀಡಲಿ ಎಂದು ಶುಭ ಹಾರೈಸಿದರು. 

ಶಾಸಕ ಯು.ಟಿ.ಖಾದರ್ ಮಾತನಾಡಿ, ಅಹ್ಮದ್ ಹಾಜಿ ತುಂಬೆ ಗ್ರಾಮದ ಶಿಲ್ಪಿಯಾಗಿದ್ದು, ಅವರ ಸಮಾಜಸೇವೆ ನಮಗೆಲ್ಲರಿಗೂ ಮಾದರಿಯಾಗಿದೆ. ತಂದೆ-ತಾಯಿ ಅವರ ಗೌರವದಿಂದ ಕಾಣುವ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಅವಕಾಶ ಸಿಕ್ಕಿರುವುದು ತನ್ನ ಭಾಗ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಎಂಎಲ್‌ಸಿ ಹರೀಶ್ ಕುಮಾರ್, ಬೆಂಗಳೂರಿನ ಟೀಕೇಸ್ ಇಂಟೀರಿಯರ್ ಸೊಲೂಶನ್ ಪ್ರೈ.ಲಿ. ನ ಟಿ.ಕೆ.ಉಮರ್, ಯೆನೆಪೊಯ ಅಬ್ದುಲ್ಲ ಕುಂಞಿ, ಯೆನೆಪೊಯ ಮುಹಮ್ಮದ್ ಕುಂಞಿ, ಪಿ.ಕೆ. ಗ್ರೂಪ್ ಕ್ಯಾಲಿಕೆಟ್‌ನ ಪಿ.ಕೆ.ಅಹ್ಮದ್, ಶಾಲಾ ಸಂಚಾಲಕ ಬಸ್ತಿ ವಾಮನ ಶೆಣೈ, ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್  ಫಾದರ್ ಡಿ. ವಾಝ್, ಅಹ್ಮದ್ ಹಾಜಿ ಅವರ ಪತ್ನಿ ಬಿಫಾತುಮಾ ಅಹ್ಮದ್ ಹಾಜಿ, ಪುತ್ರರಾದ ಅಬ್ದುಸ್ಸಲಾಂ, ಮುಹಮ್ಮದ್ ಅಶ್ರಫ್, ಪುತ್ರಿ ಮರಿಯಂ ಶಬಾನಾ ಫೈಝಲ್, ಫೈಝಲ್ ಇ.ಕೆ., ತನ್ಯ ಅಶ್ರಫ್, ಝಕರಿಯಾ, ಅಕ್ರಂ ಮೊಯ್ದಿನ್, ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಉಪಸ್ಥಿತರಿದ್ದರು.

ಎಸ್‌ಎಂಆರ್ ಸಂಸ್ಥೆಯ ಎಸ್‌ಎಂ ರಶೀದ್ ಹಾಜಿ, ಪ್ರೊ. ಯು.ಟಿ. ಇಫ್ತಿಕಾರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತಿತರ ಗಣ್ಯರು ಹಾಜರಿದ್ದರು.

ಹುಟ್ಟುಹಬ್ಬ ಆಚರಣೆ:

ಇದೇ ಸಂದರ್ಭದಲ್ಲಿ ಮರಿಯಂ ಶಬಾನಾ ಫೈಝಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ಮುಹಮ್ಮದ್ ಉಸ್ಮಾನ್ ಐಮಾನ್ ಹಾಗೂ ಶ್ರವ್ಯಾ ಆರ್. ಹುಟ್ಟುಹಬ್ಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತುಂಬೆ ಜುಮಾ ಮಸೀದಿಯ ಖತೀಬ್ ಅಬ್ದುಲ್ಲತೀಫ್ ದುಆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ವಾಗತಿಸಿದರು. ಅಹ್ಮದ್ ಹಾಜಿಯ ಮೊಮ್ಮಗಳು ಸೋಫಿಯಾ ಫೈಝಲ್ ಪುಸ್ತಕದ ಕಿರು ಪರಿಚಯವಿತ್ತರು. ಹಾಜಿ ಅವರ ಪುತ್ರಿ ಮರಿಯಂ ಶಬಾನಾ ಫೈಝಲ್ ವಂದಿಸಿದರು. ಶಿಕ್ಷಕಿ ನೀತಾಶ್ರೀ ವಂದಿಸಿದರು. ಕಚೇರಿ ಅಧೀಕ್ಷಕ ಕಬೀರ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News