ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ : ಎನ್ಎಸ್ಯುಐನಿಂದ ಕಾಲ್ನಡಿಗೆ ಜಾಥಾ
ಮಂಗಳೂರು, ಡಿ.4: ಪಶುವೈದ್ಯೆಯ ಅತ್ಯಾಚಾರ ಮತ್ತು ಜೀವಂತವಾಗಿ ದಹಿಸಿದ ಪ್ರಕರಣ ಹಾಗೂ ಗುಲ್ಬರ್ಗಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ-ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಆಗ್ರಹಿಸಿತು.
ಎನ್ಎಸ್ಯುಐ ವತಿಯಿಂದ ಬಲ್ಮಠ ಕಲೆಕ್ಟರ್ ಗೇಟ್ ಸರ್ಕಲ್ನಿಂದಆರಂಭಗೊಂಡ ಕಾಲ್ನಡಿಗೆ ಜಾಥಾವು ಸಂತ ಸೆಬಾಸ್ಟಿಯನ್ ಚರ್ಚ್ ಮುಂಭಾಗದವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಆರೋಪಿಗಳ ಪ್ರತಿಕೃತಿ ದಹಿಸಿ ಮಾನವ ಸರಪಳಿಯ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾ ಸಭೆಗೆ ಆಗಮಿಸಿದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ತ್ವರಿತವಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರಕಾರವು ಕಾನೂನು ಮಸೂದೆ ರೂಪಿಸಬೇಕು. ವಿದ್ಯಾರ್ಥಿ ಸಂಘದ ಜೊತೆ ಸೇರಿ ನ್ಯಾಯಕ್ಕಾಗಿ ಹೋರಾಟ ನಿರಂತರವಾಗಿರುತ್ತದೆ ಎಂದರು.
ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿಗಳಾದ ಸುರೇಶ್ ಶೆಟ್ಟಿ, ಶುಭೋದಯ ಆಳ್ವ ಹಾಗೂ ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿಯಾದ ಫಾರೂಕ್ ಬಾಯಬೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಯುವ ನಾಯಕರಾದ ರೂಪೇಶ್ ರೈ, ಗಿರೀಶ್ ಆಳ್ವ, ಆಶೀತ್ ಪಿರೇರಾ, ಸೌನಕ್ ರೈ, ರಾಹುಲ್ ಸುವರ್ಣ, ಅಬ್ದುಲ್ಲಾ ಬಿನ್ನು, ಶಾಂತಲಾ ಗಟ್ಟಿ, ರಮಾನಂದ ಪೂಜಾರಿ, ಅನ್ಸರುದ್ದೀನ್ ಸಾಲ್ಮರ, ಅಂಕುಶ್ ಶೆಟ್ಟಿ, ಶೇಕ್ ಅಪ್ಸಾನ್, ಶೆಲ್ಟನ್ ರೊಜಾರಿಯೋ, ಆಯಿಷಾ, ರಾಚಲ್ ನೊರೊನ್ಹಾ, ಪವನ್, ಸಮರ್ಥ್ ಭಟ್, ಶ್ರೇಯಸ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಜಿಲ್ಲಾ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಸ್ವಾಗತಿಸಿ, ವಂದಿಸಿದರು. ಮನ್ಸೂರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.