ಬೈಂದೂರು ಜಂಕ್ಷನ್ ಬಳಿ ಬಾಂಬ್ ಸಹಿತ ಇಬ್ಬರ ಸೆರೆ !

Update: 2019-12-05 16:18 GMT

ಬೈಂದೂರು, ಡಿ. 5: ಬೈಂದೂರು ಜಂಕ್ಷನ್ ಅಂಡರ್‌ಪಾಸ್ ಬಳಿ ಟೈಂ ಬಾಂಬ್ ಇಡಲು ಬಂದ ಇಬ್ಬರನ್ನು ಬಂಧಿಸುವಲ್ಲಿ ಡಿ.5ರ ಸಂಜೆ ವೇಳೆ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ‘ಸಾಗರ ರಕ್ಷಕ್-2019’ ಅಣಕು ಕಾರ್ಯಾಚರಣೆ ಇದಾಗಿದೆ. ಈ ಘಟನೆಯಿಂದ ಕೆಲಕಾಲ ಬೈಂದೂರು ಪೇಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಇದು ಅಣಕು ಕಾರ್ಯಾಚರಣೆ ಎಂಬುದಾಗಿ ತಿಳಿದು ಜನ ನಿರಾಳರಾದರು.

ಸಂಜೆ 6:15ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಂದೂರು ಅಂಡರ್ ಪಾಸ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬೈಂದೂರು ಪೊಲೀಸ್ ಠಾಣೆಯ ಪ್ರೊಬೇಶನರಿ ಪಿಎಸ್ಸೈಗಳಾದ ಇನೂಸ್ ಗಡ್ಡೇಕರ್ ಹಾಗೂ ಸುದರ್ಶನ್ ಇಬ್ಬರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು. ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರಲ್ಲಿ ದೊರೆತ ಬಾಂಬ್ ನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News