ಡಿ.8ರಂದು ಬಂಟ್ವಾಳದಲ್ಲಿ "ನಮ ಬಿರುವೆರ್ ಐಕ್ಯತಾ ಸಮಾವೇಶ"

Update: 2019-12-05 17:13 GMT

ಬಂಟ್ವಾಳ, ಡಿ. 5: ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ, ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕಗಳ ಸಹಭಾಗಿತ್ವದಲ್ಲಿ ಡಿ.8ರಂದು ಬಂಟ್ವಾಳ ಸ್ಪರ್ಶಾ ಕಲಾಮಂದಿರದಲ್ಲಿ "ನಮ ಬಿರುವೆರ್ ಐಕ್ಯತಾ ಸಮಾವೇಶ" ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಮೇಲ್ಕಾರ್‍ನ ಬಿರ್ವ ಸೆಂಟರ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಕಾರ್ಯಕ್ರಮದಲ್ಲಿ ಶ್ರೀ ರಾಮಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಮತ್ತು ಕುಕ್ಕಾಜೆ ಆಂಜನೇಯ ಕ್ಷೇತ್ರದ ಶ್ರೀಕೃಷ್ಣ ಗುರೂಜಿ ಉಪಸ್ಥಿತರಿರುವರು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಅವರಿಗೆ ಗೌರವಾಭಿನಂದನೆ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಅವರ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

10 ಸಾವಿರಕ್ಕೂ ಅಧಿಕ ಮಂದಿ ನಿರೀಕ್ಷೆ

ಗೌರವಾಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಈಗಾಗಲೇ ಸಮಿತಿಯ ಪ್ರಮುಖರನ್ನೊಳಗೊಂಡ ನಾಲ್ಕೈದು ತಂಡಗಳು ತಾಲೂಕಿನಾದ್ಯಾಂತ ಇರುವ ಬಿಲ್ಲವ ಸಂಘಟನೆಗಳು, ಬಿಲ್ಲವ ಪ್ರಮುಖರನ್ನು ಭೇಟಿ ಮಾಡಿ ಸಮಾಲೋಚನಾ ಸಭೆ ನಡೆಸಿದ್ದು, ತಾಲೂಕಿನ ಪ್ರತೀ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸುಮಾರು 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ನಾನಾ ಕಾರಣಗಳಿಂದಾಗಿ ಅಲ್ಲಲ್ಲಿ ವಿಭಜನೆಗೊಂಡಿರುವ ಬಿಲ್ಲವರು ಒಂದೇ ವೇದಿಕೆಯಡಿ ಸಂಪನ್ನಗೊಂಡು ಬಿಲ್ಲವ ಸಮಾಜದ ಗತವೈಭವ ಮತ್ತೊಮ್ಮೆ ಜಗತ್ತಿಗೆ ಸಾರಲು ಈ ಐಕ್ಯತಾ ಸಮಾವೇಶ ಮುನ್ನುಡಿಯಾಗಲಿದೆ ಎಂದು ಅವರು ಹೇಳಿದರು.

ಡಿ. 8ರಂದು ಬೆಳಿಗ್ಗೆ 8.30ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆಯಾಗಿ ಅಲ್ಲಿಂದ ಸ್ವಾಮೀಜಿ ಸಹಿತ ಗಣ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ಪರ್ಶಾ ಕಲಾಮಂದಿರಕ್ಕೆ ಕರೆತರಲಾಗುವುದು. ಬೆಳಿಗ್ಗೆ 9.30ಕ್ಕೆ ಸಮಾವೇಶ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.

ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಕುಮಾರ್, ನಿವೃತ್ತ ಡಿವೈಎಸ್ಪಿ ಬಿ.ಕೆ.ಶಿವರಾಮ್, ಆಕಾಶವಾಣಿ ಕಾರ್ಯ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಉಡುಪಿ ಎಎಸ್ಪಿ ಕುಮಾರಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಡಾ.ವಿಜಯ ಪ್ರಕಾಶ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಆಪ್ತ ಸಹಾಯಕ ಜಗನ್ನಾಥ ಬಂಗೇರ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಎಸ್‍ಎನ್‍ಡಿಪಿ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾಂಜಲಿ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಉದ್ಯಮಿ ಜಯದೀಪ್ ಡಿ.ಸುವರ್ಣ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ಬಿ.ಇಂದಿರೇಶ್, ಮಾಣಿ ಘಟಕದ ಅಧ್ಯಕ್ಷ ರಮೇಶ್ ಮುಜಲ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

2018-19ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ 90 ಕ್ಕಿಂತ ಹೆಚ್ಚು ಅಂಕ ಪಡೆದ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಎ.ರುಕ್ಮಯ ಪೂಜಾರಿ, ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಕೆ.ಮಾಯಿಲಪ್ಪ ಸಾಲ್ಯಾನ್ ಗೌರವಾಧ್ಯಕ್ಷರಾಗಿರುವ, ಯಶವಂತ ಪೂಜಾರಿ ದೇರಾಜೆಗುತ್ತು ಅಧ್ಯಕ್ಷರಾಗಿರುವ ಜಗದೀಶ ಕೊಯಿಲ ಪ್ರಧಾನ ಕಾರ್ಯದರ್ಶಿ, ಪ್ರೇಮನಾಥ್ ಕೆ.ಕೋಶಾಧಿಕಾರಿಯಾಗಿ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಕೆ.ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಕೊಯ್ಲ, ಕೋಶಾಧಿಕಾರಿ ಪ್ರೇಮನಾಥ ಕೆ, ಉಪಾಧ್ಯಕ್ಷೆ ಜಯಂತಿ ವಿ. ಪೂಜಾರಿ, ಜತೆಕಾರ್ಯದರ್ಶಿಗಳಾದ ಸುಂದರ ಪೂಜಾರಿ ಬೋಳಂಗಡಿ, ಆನಂದ ಸಾಲ್ಯಾನ್ ಶಂಭೂರು, ಸಲಹೆಗಾರರಾದ ಎನ್.ಪುರುಷ ಸಾಲ್ಯಾನ್ ನೆತ್ರಕೆರೆ, ವಿವಿಧ ಸಮಿತಿಗಳ ಪ್ರಮುಖರಾದ ಶೈಲಜಾ ರಾಜೇಶ್, ಮೋನಪ್ಪ ದೇವಸ್ಯ, ಗೋಪಾಲ ಅಂಚನ್, ಸುರೇಶ್ ಪೂಜಾರಿ, ಜಯರಾಮ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News