ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಫಲಾನುಭವಿಗಳಿಗೆ ಸಹಾಯಧನ ವಿತರಣೆ

Update: 2019-12-06 13:49 GMT

ಮಂಗಳೂರು, ಡಿ. 6:ಮನುಷ್ಯನಿಗೆ ಜೀವನದಲ್ಲಿ ಬಡತನ, ಶ್ರೀಮಂತಿಕೆ ಶಾಶ್ವತವಲ್ಲ. ಸತ್ಯ, ಧರ್ಮದಲ್ಲಿ ನಡೆದರೆ ಆತನ ದಾರಿ ಸುಗಮವಾಗಿ ಸಾಗುತ್ತದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ತೋನ್ಸೆ ಆನಂದ ಶೆಟ್ಟಿ ಹೇಳಿದರು.

ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಫಲಾನುಭವಿ ಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು.

ಬಂಟರು ಅಂದರೆ ಒಂದು ಕುಟುಂಬವಿದ್ದಂತೆ. ಮನುಷ್ಯನಿಗೆ ಕಷ್ಟ-ಸುಖ ಸಾಮಾನ್ಯ. ಬಂಟ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಹಾಯ ಧನ ನೀಡಿ ಅವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿದೆ. ಒಕ್ಕೂಟ ಸಹಾಯಧನ ವಿತರಿಸುವಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಹಂಚಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಈ ಸಂಘಟನೆ ಇತರ ಬಂಟರ ಸಂಘಗಳಿಗೆ ಮಾದರಿಯಾಗಿದೆ ಎಂದು ತೋನ್ಸೆ ಆನಂದ ಶೆಟ್ಟಿ ನುಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಈ ಬಾರಿ 26 ಲಕ್ಷಕ್ಕೂ ಅಧಿಕ ಧನ ಸಹಾಯವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಕೆಮ್ಮಣ್ಣು ಬಂಟರ ಸಂಘದ ಅಧ್ಯಕ್ಷ ತೋನ್ಸೆ ಮನೋಹರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸುರೇಶ್ ಶೆಟ್ಟಿ ಸೂರಿಂಜೆ, ಹೇಮನಾಥ ಶೆಟ್ಟಿ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 36 ಮಂದಿಗೆ ಮನೆ ಕಟ್ಟಲು ಮತ್ತು 14 ಮಂದಿಗೆ ವೈದ್ಯಕೀಯ ಹಾಗೂ 13 ಮಂದಿಯ ಮದುವೆಗೆ ಸಹಾಯ ಧನ ವಿತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತೀಕ್ಷಾ ಶೆಟ್ಟಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆಗೈದ ಸಾನ್ವಿ ಆರ್.ಶೆಟ್ಟಿ ಸುರತ್ಕಲ್ ಹಾಗೂ ಒಕ್ಕೂಟಕ್ಕೆ ಪ್ರಥಮ ನಿರ್ದೇಶಕರಾಗಿ 25 ಲ.ರೂ. ದೇಣಿಗೆ ನೀಡಿದ ತೋನ್ಸೆ ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದಿಂದ ಎಂ. ಫ್ರೆಂಡ್ಸ್ ಸಂಸ್ಥೆಯ ಕಾರುಣ್ಯ ಯೋಜನೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಪೋಷಕರಿಗೆ ಒಂದು ತಿಂಗಳ ರಾತ್ರಿ ಊಟದ ವ್ಯವಸ್ಥೆಗೆ ನೀಡಿದ ಧನ ಸಹಾಯವನ್ನು ಎಂ. ಫ್ರೆಂಡ್ಸ್ ಸಂಸ್ಥೆಯ ಸುಜಾಹ್ ಮುಹಮ್ಮದ್ ಅಲಂಕಾರ್ ಮತ್ತು ಝುಬೇರ್ ಕಂಬಳಬೆಟ್ಟು ಸ್ವೀಕರಿಸಿದರು.

ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News