ಲಕ್ಷಾಂತರ ರೂ. ಮೌಲ್ಯದ ಗೇರುಬೀಜ ಕಳವು
Update: 2019-12-07 16:15 GMT
ಹೆಬ್ರಿ, ಡಿ.7: ಹೆಬ್ರಿ ಗ್ರಾಮದ ಬಚ್ಚಪ್ಪುರಸ್ತೆಯಲ್ಲಿರುವ ಶ್ರೀಓಂಕಾರ್ ಇಂಡಸ್ಟ್ರೀಸ್ ಎಂಬ ಗೇರುಬೀಜ ಫ್ಯಾಕ್ಟರಿಗೆ ಡಿ.6ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಗೇರು ಬೀಜದ ತಿರುಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕುಚ್ಚೂರು ರಸ್ತೆಯ ನಿವಾಸಿ ಎಚ್. ದಾಮೋದರ ನಾಯಕ್ ಎಂಬವರ ಪತ್ನಿ ಸೂಕ್ಷ್ಮ ಎಂಬವರ ಮಾಲಕತ್ವದ ಗೇರುಬೀಜದ ಫ್ಯಾಕ್ಟರಿಯ ಬೀಗವನ್ನು ನಕಲಿ ಕೀ ಬಳಸಿ ತೆಗೆದು ಒಳನುಗ್ಗಿದ ದುಷ್ಕರ್ಮಿಗಳು, 300 ರಿಂದ 400 ಕೆಜಿ ಗೇರುಬೀಜದ ತಿರುಳುಗಳನ್ನು ಕಳವು ಮಾಡಿದ್ದಾರೆನ್ನಲಾಗಿದೆ. ಕಳವಾದ ಸೊತ್ತುಗಳ ಮೌಲ್ಯ 2,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.