×
Ad

ನಕಲಿ ಟಿವಿ ಚಾನೆಲ್‌ಗಳ ವಿರುದ್ಧ ಕ್ರಮ: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Update: 2019-12-10 20:45 IST

ಉಡುಪಿ, ಡಿ.10: ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಅಡಿ ಚಾನೆಲ್ ಗಳು ನೋಂದಣಿಯಾಗಿರಬೇಕಿದೆ. ಆದರೆ, ಇತ್ತೀಚೆಗೆ ಟಿವಿ ಚಾನೆಲ್‌ಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಕೆಲವು ನಕಲಿ ಚಾನೆಲ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಚಾನೆಲ್‌ಗಳ ದಾಖಲೆ ಪರಿಶೀಲನೆ ನಡೆಸಿ, ನಕಲಿ ಚಾನೆಲ್‌ಗಳನ್ನು ಪತ್ತೆ ಹಚ್ಚಿ ಕ್ರಮ ಜರಗಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಅವರು ವಾರ್ತಾ ಇಲಾಖೆಗೆ ಸೂಚಿಸಿದರು.

ಕೇಬಲ್ ಆಪರೇಟರ್‌ಗಳ ನೋಂದಣಿ ಕಡ್ಡಾಯ: ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ಆಪರೇಟರ್‌ಗಳು ನಿಯಮಾನುಸಾರ ಪ್ರಧಾನ ಅಂಚೆ ಕಚೇರಿ ಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಲೇಬೇಕು. ಈ ಕುರಿತು ಅಂಚೆ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ನೋಂದಣಿಯಾಗದ ಕೇಬಲ್ ಆಪರೇಟರ್‌ಗಳು ಕೂಡಲೇ ತಮ್ಮ ವ್ಯವಹಾರ ವನ್ನು ಸ್ಥಗಿತ ಗೊಳಿಸಬೇಕು. ಇಲ್ಲದಿದ್ದರೇ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರಗಿಸಿ,ಸಂಬಂಧಪಟ್ಟ ಕೇಬಲ್ ಉಪಕರಣಗಳನ್ನು ವಶಪಡಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‌ ಗಳ ಉಪಕರಣವನ್ನು ವಶಪಡಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಈ ಕಾಯ್ದೆಯ ಅಧಿಕೃತ ಅಧಿಕಾರಿಗಳು ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ನಿಗದಿತ ದರವನ್ನಷ್ಟೇ ಪಡೆಯ ಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದ್ದಲ್ಲಿ ಸಾರ್ವಜನಿಕರು ದೂರು ನೀಡ ಬಹುದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ದೂರು ಕೋಶ ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲಾ ವಾರ್ತಾ ಇಲಾಖೆ ಕಚೇರಿಗೆ ಲಿಖಿತವಾಗಿ ದೂರು ನೀಡಬಹುದು. ಈಮೇಲ್ (varthabhavanaudupi@gmail.com) ಮೂಲಕವೂ ದೂರು ನೀಡಬಹುದು. ಗ್ರಾಹಕರಿಂದ ಪಡೆಯುವ ಮಾಸಿಕ ಶುಲ್ಕಕ್ಕೆ ರಶೀದಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟಿವಿಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮ ಸಮಾಜದಲ್ಲಿ ಶಾಂತಿ ಭಂಗ ಅಥವಾ ಯಾವುದೇ ಸಮುದಾಯಗಳ ಮಧ್ಯೆ ವೈರತ್ವ, ನೋವು ಉಂಟು ಮಾಡಿದರೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಮಾಜದ ಹಿತಕ್ಕೆ ಭಂಗ ತರುವ ಕಾರ್ಯಕ್ರಮ ಮತ್ತು ಆಕ್ಷೇಪಾರ್ಹ ದೃಶ್ಯಪ್ರಸಾರ ಮಾಡುವ ಯಾವುದೇ ಕೇಬಲ್ ಅಪರೇಟರ್ ಅಥವಾ ಚಾನೆಲ್ ವಿರುದ್ಧ ನಿಯಾಮಾನುಸಾರ ಕ್ರಮ ತೆಗೆದುಕೊಳ್ಳಲಾಗುವ ಅಧಿಕಾರ ಸಮಿತಿಗೆ ಇದೆ ಎಂದು ಜಗದೀಶ್ ತಿಳಿಸಿದರು.

ಇ-ಪೇಪರ್ ಹಾಗೂ ಮೊಬೈಲ್ ಲಿಂಕ್ ಮೂಲಕ ಸುದ್ದಿಗಳನ್ನು ಕಳುಹಿಸುವ ಮಾಧ್ಯಮಗಳು ನೋಂದಣಿಯಾಗಬೇಕಿದೆ. ಅನಧಿಕೃತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಇದೇ ವೇಳೆ ಎಚ್ಚರಿಸಿದರು.

ಸಮಿತಿಯ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಕೇಬಲ್ ಟಿವಿ ಚಾನೆಲ್‌ಗಳ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಅನಪೇಕ್ಷಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಹಾಗೂ ಕೇಬಲ್ ಆಪರೇಟರ್‌ಗಳ ಸೇವೆಯ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಇಲಾಖೆಯಲ್ಲಿ ದೂರು ಕೋಶ ಇದೆ. ಉಡುಪಿ ಜಿಲ್ಲೆಯಲ್ಲಿ ಕೇಬಲ್ ಆಪರೇಟರ್‌ಗಳು ನೋಂದಣಿಗೊಂಡಿರುವ ಬಗ್ಗೆ ಅಂಚೆ ಇಲಾಖೆ ಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗು ವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿ ಸದಸ್ಯರಾದ ಡಾ. ವಿರೂಪಾಕ್ಷ ದೇವರಮನೆ, ಶೃತಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News