ಮಂಗಳೂರು ವಿವಿ ನಿವೃತ್ತ ಪ್ರೊ. ಬಿ.ಸುರೇಂದ್ರರಾವ್ ನಿಧನ

Update: 2019-12-10 17:19 GMT

ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರೊ. ಸುರೇಂದ್ರ ರಾವ್(71) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಮೂಲತಃ ಉಪ್ಪಿನಂಗಡಿಯ ಬಂದಾರಿನಲ್ಲಿ ಜನಿಸಿರುವ ಪ್ರೊ. ಸುರೇಂದ್ರ ರಾವ್ ಅವರು ಪುತ್ತೂರಿನಲ್ಲಿ ವಕೀಲರಾಗಿದ್ದ ಶ್ರೀಪತಿ ರಾವ್ ಅವರ ಪುತ್ರ.

ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಪದವಿಯನ್ನು ಪೂರೈಸಿದ್ದರು. ಪ್ರೊ.ಶೇಕ್ ಆಲಿ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿಯನ್ನು ಪೂರೈಸಿದ್ದಾರೆ. 1973ರಿಂದ82ರವರೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಅವರು 1982ರಲ್ಲಿ ಮಂಗಳೂರು ವಿವಿ ಇತಿಹಾಸ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ 2008ರಲ್ಲಿ ನಿವೃತ್ತರಾಗಿದ್ದಾರೆ.

ಬಂಟ್ಸ್: ಹಿಸ್ಟರಿ ಆ್ಯಂಡ್ ಕಲ್ಚರ್, ವೇಯ್ಸ್ ಆ್ಯಂಡ್ ಬಿವೇಯ್ಸ್ ಆಫ್ ಹಿಸ್ಟರಿ ಸೇರಿದಂತೆ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಬ್ಯಾರಿ, ಕನ್ನಡ, ಇಂಗ್ಲಿಷ್ ನಿಘಂಟುಗಳನ್ನು ಪರಿಚಯಿಸಿದ್ದು, ಬಿಎ ಮೊಯ್ದಿನ್ ಅವರ 'ನನ್ನೊಳಗಿನ ನಾನು' ಎಂಬ ಪುಸ್ತಕವನ್ನು ಅವರು 'ಐ ವಿತ್ ಇನ್ ಮಿ' ಎಂದು ಇಂಗ್ಲಿಷ್ ಗೆ ಭಾಷಾಂತರಿಸಿದ್ದಾರೆ. ಇತ್ತೀಚಿನ ಹಲವು ವರ್ಷದಿಂದ ಪ್ರೊ. ಸುರೇಂದ್ರರಾವ್ ಮತ್ತು ಚಿನ್ನಪ್ಪ ಗೌಡರು ಜೊತೆಯಾಗಿ ಒಟ್ಟು ಆರು ಕೃತಿಗಳನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.

ಇವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರೊ.ರಾವ್ ಅವರ ನಿಧನಕ್ಕೆ ಮಂಗಳೂರು ವಿವಿ ಕುಲಪತಿ ಪ್ರೊ. ಯಡಪಡಿತ್ತಾಯ, ಕುಲಸಚಿವ ಎ.ಎಂ.ಖಾನ್, ಪ್ರೊ.ವಿವೇಕ್ ರೈ, ಪ್ರೊ.ಚಿನ್ನಪ್ಪ ಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ಅಂತ್ಯಕ್ರಿಯೆಯು ಬುಧವಾರ ಬೆಳಗ್ಗೆ 9 ಗಂಟೆಗೆ ಬೊಳುವಾರಿನ ಸುಲ್ತಾನ್ ಬತ್ತೇರಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News