ತೆಕ್ಕಟ್ಟೆ: ಮಾಲಾಡಿಯಲ್ಲಿ ಮತ್ತೊಂದು ಚಿರತೆ ಸೆರೆ

Update: 2019-12-12 15:05 GMT

ಉಡುಪಿ, ಡಿ.12: ತೆಕ್ಕಟ್ಟೆ ಗ್ರಾಮದ ಮಾಲಾಡಿ ಎಂಬಲ್ಲಿರುವ ಹಾಡಿಯಲ್ಲಿ 25 ದಿನಗಳ ಹಿಂದೆ ಇರಿಸಲಾದ ಅರಣ್ಯ ಇಲಾಖೆಯ ಬೋನಿನಲ್ಲಿ ಮತ್ತೊಂದು ಚಿರತೆ ಡಿ.12ರಂದು ಬೆಳಗಿನ ಜಾವ ಸೆರೆಯಾಗಿರುವ ಬಗ್ಗೆ ವರದಿಯಾಗಿದೆ.

ಹಲವು ವರ್ಷಗಳಿಂದ ಈ ಪರಿಸರದಲ್ಲಿ ಸಾಕಷ್ಟು ಚಿರತೆಗಳ ಓಡಾಟ ನಡೆಸುತ್ತಿವೆ ಎಂದು ಭಯಭೀತರಾದ ಸ್ಥಳೀಯರು, ಈ ಸಂಬಂಧ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಅದರಂತೆ 2018ರ ಆಗಸ್ಟ್‌ನಲ್ಲಿ ಮೊದಲ ಚಿರತೆಯನ್ನು ಅರಣ್ಯ ಇಲಾಖೆಯವರು ಈ ಪ್ರದೇಶದಲ್ಲಿ ಸೆರೆ ಹಿಡಿದಿದ್ದರು. ಅದೇ ರೀತಿ 2019ರ ಅ.6ರಂದು ಇದೇ ಸ್ಥಳದಲ್ಲಿ ಇರಿಸಲಾದ ಬೋನಿಗೆ ಸುಮಾರು 10 ವಷರ್ ಪ್ರಾಯದ ಗಂಡು ಚಿರತೆ ಬಿದ್ದಿತ್ತು.

ಹೀಗೆ ಮಾಲಾಡಿ ಪ್ರದೇಶದಲ್ಲಿ ಒಂದೂವರೆ ವರ್ಷ ಅವಧಿಯಲ್ಲಿ ಮೂರು ಮತ್ತು ಅಲ್ಲೇ ಸಮೀಪದ ಕಾಳಾವರದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಎರಡು ಸೇರಿದಂತೆ ಒಟ್ಟು ಐದು ಚಿರತೆಗಳನ್ನು ಸೆರೆಹಿಡಿಯಲಾಗಿದೆ.

ಇಂದು ಮಾಲಾಡಿಯಲ್ಲಿ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಯಾಗಿದ್ದು, ಮತ್ತಷ್ಟು ಚಿರತೆ ಈ ಪ್ರದೇಶದಲ್ಲಿರುವ ಬಗ್ಗೆ ಸ್ಥಳೀಯರು ದೂರಿರುವ ಹಿನ್ನೆಲೆಯಲ್ಲಿ ಮತ್ತೆ ಅದೇ ಸ್ಥಳದಲ್ಲಿ ಬೋನು ಇರಿಸಲಾಗಿದೆ. ಕುಂದಾಪುರ ಪಶು ವೈದ್ಯಾಧಿಕಾರಿಗಳಲ್ಲಿ ಪರೀಕ್ಷಿಸಿ, ನಂತರ ಕೊಲ್ಲೂರು ಅಭಯಾರಣ್ಯದಲ್ಲಿ ಈ ಚಿರತೆಯನ್ನು ಬಿಡಲಾಯಿತು.

ಅದೇ ರೀತಿ ಕಾಳಾವರದಲ್ಲಿಯೂ ಚಿರತೆ ಇರುವ ಬಗ್ಗೆ ದೂರು ಬಂದಿದ್ದು, ಅಲ್ಲಿಯೂ ಬೋನು ಇರುವ ಬಗ್ಗೆ ಯೋಜನೆ ಹಾಕಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ, ಅರಣ್ಯ ವೀಕ್ಷಕ ಸೋಮಶೇಖರ್, ಚಾಲಕ ಅಶೋಕ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News