Breaking News: ಗುಂಡೇಟಿನಿಂದ ಇಬ್ಬರು ಜಾಮಿಯಾ ಪ್ರತಿಭಟನಕಾರರು ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ, ಡಿ.17: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ರವಿವಾರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದರೂ ಈಗ ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಪ್ರತಿಭಟನೆಯ ಸಂದರ್ಭ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದು ಇವರಲ್ಲಿ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದರು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೇಳಿದ್ದಾರೆ. ವಿವಿಯ ವಿದ್ಯಾರ್ಥಿ ಎಜಾಝ್ ಎಂಬಾತ ಆಸ್ಪತ್ರೆಯ ಜನರಲ್ ವಾರ್ಡ್ನಲ್ಲಿ ದಾಖಲಾಗಿದ್ದು ಈತನ ಎದೆಗೆ ಗುಂಡು ಬಡಿದಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸೆಲ್ ಸಿಡಿಸಿದಾಗ ಅದರ ಚೂರುಗಳು ಗಾಯಾಳುವಿನ ದೇಹವನ್ನು ಹೊಕ್ಕಿವೆ ಎಂಬುದು ಪೊಲೀಸರ ಹೇಳಿಕೆಯಾಗಿದೆ. ಆದರೆ ಘಟನೆಯ ವಿಡಿಯೋ ದೃಶ್ಯಾವಳಿ ಗಮನಿಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿದ್ದ ಕುರುಹು ಕಾಣಿಸುವುದಿಲ್ಲ ಎಂದು ಗಾಯಾಳುಗಳ ಕುಟುಂಬದವರು ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಶುಐಬ್ ಖಾನ್ (23 ವರ್ಷ) ಹಾಗೂ ಮುಹಮ್ಮದ್ ತಮೀನ್ ಎಂಬವರಿಗೂ ಗುಂಡೇಟಿನ ಗಾಯವಾಗಿದೆ ಎಂದು ಆಸ್ಪತ್ರೆಯವರು ನೀಡಿರುವ ಬಿಡುಗಡೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.