'ಜಿಹಾದಿಗಳು, ಮಾವೋವಾದಿಗಳು ವಿದ್ಯಾರ್ಥಿ ಚಳವಳಿಯಲ್ಲಿ ನುಸುಳುವ ಬಗ್ಗೆ ಎಚ್ಚರ ಅಗತ್ಯ'
Update: 2019-12-19 08:38 GMT
ಹೊಸದಿಲ್ಲಿ: 'ಜಿಹಾದಿಗಳು ವಿದ್ಯಾರ್ಥಿ ಚಳವಳಿಯಲ್ಲಿ ನುಸುಳಿಕೊಳ್ಳುವ ಬಗ್ಗೆ ಜಾಗರೂಕರಾಗಿರಬೇಕು' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜಾಮಿಯಾ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವಿನ ಸಂಘರ್ಷಕ್ಕೆ ಕಾಂಗ್ರೆಸ್ ಕಾರಣ ಎಂದು ಅವರು ಟೀಕಿಸಿದ್ದಾರೆ.
2020ರ ಬಜೆಟ್ ಬಗ್ಗೆ ವಿವಿಧ ಹಕ್ಕುದಾರರ ಜತೆ ಸಲಹಾ ಸಭೆ ನಡೆಸಿದ ಹಣಕಾಸು ಸಚಿವೆ ಪಿಟಿಐ ಜತೆ ಮಾತನಾಡಿ, "ಕಳೆದ ರಾತ್ರಿ ಜಾಮಿಯಾದಲ್ಲಿ ಏನು ನಡೆಯಿತು ಎನ್ನುವುದು ನನಗೆ ಗೊತ್ತಿಲ್ಲ; ಆದರೆ ಜಿಹಾದಿಗಳು, ಮಾವೋವಾದಿಗಳು, ಪ್ರತ್ಯೇಕತಾವಾದಿಗಳು ವಿದ್ಯಾರ್ಥಿ ಹೋರಾಟಕ್ಕೆ ನುಸುಳುತ್ತಿರುವ ಬಗ್ಗೆ ಜಾಗರೂಕರಾಗಿರಬೇಕು" ಎಂದು ಹೇಳಿದರು.
"ಸಿಎಎಯಂಥ ಭಾವನಾತ್ಮಕ ವಿಷಯಗಳ ಬಗ್ಗೆ ಜನರ ಭಾವನೆಗಳನ್ನು ಕೆರಳಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ತೋರಿಸುತ್ತದೆ" ಎಂದೂ ಅವರು ಹೇಳಿದರು.