ಮಂಗಳೂರು: ಮಗಳ ಅತ್ಯಾಚಾರಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
ಮಂಗಳೂರು : ಅಪ್ರಾಪ್ತ ವಯಸ್ಸಿನ ಮಗಳನ್ನು ನಿರಂತರ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ಪೊಕ್ಸೊ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮೂಲತಃ ಉತ್ತರ ಭಾರತದ, ಪ್ರಸ್ತುತ ಬೋಳಾರ ಲೇಬರ್ ಕಾಲನಿಯ ನಿವಾಸಿ ಕಿಶೋರ್ (36) ಶಿಕ್ಷೆಗೊಳಗಾದ ಅಪರಾಧಿ.
ಕಿಶೋರ್ ವಿರುದ್ಧ ಪೊಲೀಸರು ದಾಖಲಿಸಿದ್ದ ಐಪಿಸಿ 376 (ಅತ್ಯಾಚಾರ), 506 (ಕೊಲೆ ಬೆದರಿಕೆ), ಪೊಕ್ಸೊ ಕಾಯ್ದೆ 5 ಮತ್ತು 6 ಕಲಂ (ಲೈಂಗಿಕ ದೌರ್ಜನ್ಯ)ರಡಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಶುಕ್ರವಾರ ನೀಡಿದ್ದ ತೀರ್ಪಿನಲ್ಲಿ ಆರೋಪ ಸಾಬೀತುಪಡಿಸಿದ್ದರು. ಅಲ್ಲದೆ ಸೋಮವಾರಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ್ದರು. ಅದರಂತೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಶಿಕ್ಷೆಯ ವಿವರ: ಐಪಿಸಿ 376 (ಅತ್ಯಾಚಾರ) ಮತ್ತು ಪೊಕ್ಸೊ ಸೆ. 6 (ಲೈಂಗಿಕ ದೌರ್ಜನ್ಯ) ಅನ್ವಯ ಜೀವಾವಧಿ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 3,000 ರೂ. ಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು ಹಾಗೂ 2,000 ರೂ. ಸರಕಾರಕ್ಕೆ ಪಾವತಿಸಬೇಕು. ಸಂತ್ರಸ್ತ ಬಾಲಕಿಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕವೂ ಸರಕಾರದಿಂದ ಪರಿಹಾರ ಪಡೆಯ ಬಹುದು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ವಿವರ: 2016ರಲ್ಲಿ ಆರೋಪಿ ಕಿಶೋರ್ ತನ್ನ ಹೆಂಡತಿ ಹೆರಿಗೆಗೆಂದು ಅಸ್ಪತ್ರೆಯಲ್ಲಿ ದಾಖಲಾದ ಸಂದರ್ಭ 13 ವರ್ಷ ಪ್ರಾಯದ ತನ್ನ ಮಗಳನ್ನು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದ. ಆರೋಪಿಯ ಕೃತ್ಯಕ್ಕೆ ಬಾಲಕಿ ಹೆದರಿ ಸುಮ್ಮನಾಗಿದ್ದನ್ನು ಗಮನಿಸಿದ ಆರೋಪಿ ಬಳಿಕ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ. ಇದರ ಪರಿಣಾಮ ಬಾಲಕಿ ಅಸೌಖ್ಯಕ್ಕೀಡಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಹಾಗೇ ಲೇಡಿಗೋಶನ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ದಾಗ ಬಾಲಕಿ ಗರ್ಭಿಣಿ ಎಂದು ತಿಳಿದು ಬಂದಿತ್ತು. ಅಲ್ಲದೆ ಕೆಲವು ದಿನಗಳ ಬಳಿಕ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆರೋಪಿಯ ವಿರುದ್ಧ ಬಾಲಕಿಯ ತಾಯಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಅದರಂತೆ ಇನ್ಸ್ಪೆಕ್ಟರ್ ಕಲಾವತಿ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 12ನೇ ಸಾಕ್ಷಿದಾರರು ಮತ್ತು 24 ದಾಖಲೆಗಳನ್ನು ಪರಿಗಣಿಸಲಾಗಿತ್ತು. ಮಗುವನ್ನು ಡಿಎನ್ಎ ಪರೀಕ್ಷೆಗೊಳಪಡಿಸಿದಾಗ ಕಿಶೋರ್ ಮೇಲಿದ್ದ ಆರೋಪ ಸಾಬೀತಾಗಿತ್ತು. ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.