9 ಅತ್ಯಾಚಾರ, ಕೊಲೆ ಮಾಡಿದ್ದ ಹೈದರಾಬಾದ್ ಅತ್ಯಾಚಾರ ಆರೋಪಿಗಳು: ಪೊಲೀಸರ ಹೇಳಿಕೆ

Update: 2019-12-18 17:10 GMT

ಹೈದರಾಬಾದ್, ಡಿ.18: ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ಇದೇ ರೀತಿ 9 ಯುವತಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಲಾರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಈ ಅಪರಾಧ ಕೃತ್ಯ ಎಸಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಎನ್‌ಕೌಂಟರ್‌ನಲ್ಲಿ ಹತರಾಗಿದ್ದ ನಾಲ್ವರು ಆರೋಪಿಗಳಲ್ಲಿ ಮುಹಮ್ಮದ್ ಆರಿಫ್ ಮತ್ತು ಚಿಂತಕುಂಟ ಚೆನ್ನಕೇಶವುಲು ಈ ಹಿಂದೆ ಇದೇ ರೀತಿ 9 ಯುವತಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ, ಸಂಗಾರೆಡ್ಡಿ ಹಾಗೂ ಮಹಬೂಬ್‌ನಗರದಲ್ಲಿ ಮೂವರು ಯುವತಿಯರ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದರು. ತೆಲಂಗಾಣ ಮತ್ತು ಕರ್ನಾಟಕದ ಗಡಿ ಭಾಗದ ಜಿಲ್ಲೆಯಲ್ಲಿ 6 ಯುವತಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದರು. ಅಲ್ಲದೆ ಇವರಿಬ್ಬರು ಸುಮಾರು 15ರಷ್ಟು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ. ಆರೋಪಿಗಳ ವಿಚಾರಣೆ ಸಂದರ್ಭ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಕರ್ನಾಟಕದ ಗಂಗಾವತಿಯಿಂದ ಹೈದರಾಬಾದ್‌ಗೆ ಲಾರಿಯಲ್ಲಿ ಇಟ್ಟಿಗೆ ಸಾಗಿಸುತ್ತಿದ್ದ ಸಂದರ್ಭ ಟೋಲ್‌ ಪ್ಲಾಝಾದ ಬಳಿ ಪಶುವೈದ್ಯೆಯನ್ನು ಕಂಡು ಆರಿಫ್ ಮತ್ತೊಂದು ಅಪರಾಧ ಕೃತ್ಯಕ್ಕೆ ಯೋಜನೆ ರೂಪಿಸಿದ್ದಾನೆ. ಬಳಿಕ ಚೆನ್ನಕೇಶವುಲು ಮತ್ತು ಇತರ ಇಬ್ಬರು ಲಾರಿ ಕಾರ್ಮಿಕರಾದ ಶಿವ ಹಾಗೂ ನವೀನರ ಜೊತೆ ಸೇರಿಕೊಂಡು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇದೀಗ ಕರ್ನಾಟಕ- ತೆಲಂಗಾಣ ಹೆದ್ದಾರಿ ಬದಿ ಸುಟ್ಟ ರೀತಿಯಲ್ಲಿ ಯುವತಿಯರ ಮೃತದೇಹ ಪತ್ತೆಯಾಗಿರುವ ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿಸಿರುವ ಸೈಬರಾಬಾದ್ ಪೊಲೀಸರ ಒಂದು ತಂಡ ರಾಯಚೂರು, ಕಲ್ಬುರ್ಗಿ ಮತ್ತು ಕೊಪ್ಪಳಕ್ಕೆ ತೆರಳಿ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News