×
Ad

ಮಂಗಳೂರಿನಲ್ಲಿ ಗೋಲಿಬಾರ್ ಪ್ರಕರಣ : ಹಾಲಿ ನ್ಯಾಯಾಧೀಶರಿಂದಲೇ ತನಿಖೆಯಾಗಬೇಕು- ಸಿದ್ದರಾಮಯ್ಯ

Update: 2019-12-23 18:13 IST

ಮಂಗಳೂರು, ಡಿ.23: ಪ್ರತಿಭಟನಾ ನಿರತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಇಬ್ಬರು ಅಮಾಯರ ಸಾವಿಗೆ ಕಾರಣವಾದ ಘಟನೆ ಕುರಿತಂತೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕೆಂಬುದು ತಮ್ಮ ಬೇಡಿಕೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರೇ ಗೋಲಿಬಾರ್ ಮಾಡಿರುವುದು. ಅವರಿಂದಲೇ ತನಿಖೆ ನಡೆಸಿದರೆ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಹಾಗೂ ವಿನಾಕಾರಣ ಗೋಲಿಬಾರ್ ಮಾಡಿದ ಪೊಲೀಸರನ್ನು ರಕ್ಷಿಸುವ ತಂತ್ರಗಾರಿಕೆ ಎಂದು ಅವರು ಹೇಳಿದರು.

ಘಟನೆಗೆ ಸಂಬಂಧಿಸಿ ಪೊಲೀಸರು ಮೃತಪಟ್ಟಿರುವ ಇಬ್ಬರನ್ನೂ ಅಪರಾಧಿಗಳನ್ನಾಗಿ ಮಾಡಿರುವುದು ದು:ಖಕರ ಸಂಗತಿ. ಸತ್ತವರನ್ನು ಅಪರಾಧಿಗಳನ್ನಾಗಿಸುವುದನ್ನು ನಾನೆಲ್ಲೂ ನೋಡಿಲ್ಲ. ಘಟನೆಗೆ ಸಂಬಂಧಿಸಿ ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ನಿರಪರಾಧಿಗಳು. ಪೊಲೀಸ್‌ನವರೇ ಹಿಂಸೆಗೆ ಪ್ರಚೋದನೆ ನೀಡಿರುವುದು ಘಟನಾ ಸ್ಥಳದ ವೀಡಿಯೋಗಳಲ್ಲಿ ಬಯಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬೊಮ್ಮಾಯಿ ಅವರೇ ಹೊಣೆ. ಪ್ರಕರಣದ ಕುರಿತು ಕೂಲಂಕುಷ ತನಿಖೆ ಆಗಬೇಕು. ನ್ಯಾಯಾಂಗ ತನಿಖೆಯಿಂದ ಮಾತ್ರವೇ ಸತ್ಯ ತಿಳಿಯಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಸುರೇಶ್ ಅಂಗಡಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ

ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಬಂದೂಕುಗಳು ಪೂಜೆ ಮಾಡಲಿರುವುದೇ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರ ಬೇಜವಾಬ್ದಾರಿ ಹೇಳಿಕೆ ಇದಾಗಿದ್ದು, ಇದರ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಬೇಕು ಎಂದರು.

ಕೇಂದ್ರ ಸಚಿವರಾಗಿ ಈ ರೀತಿಯ ಹೇಳಿಕೆಯ ಮೂಲಕ ಯಾರಿಗೆ ಪ್ರಚೋದನಾಕಾರಿ ಸಂದೇಶವನ್ನು ಅವರು ನೀಡಿದ್ದಾರೆ. ಅವರು ಒಂದು ಸೆಕೆಂಡ್ ಕೂಡಾ ಮಂತ್ರಿಯಾಗಿ ಮುಂದುವರಿಯಲು ಅನರ್ಹ ಎಂದರು.

ಮಾಜಿ ಸಚಿವ ಯು.ಟಿ.ಖಾದರ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಪ್ರಚೋದನಾಕಾರಿ ಎಂದು ಹೇಳಿ ಎಫ್‌ಐಆರ್ ಮಾಡಲಾಗಿದೆ. ಆದರೆ ಅದು ಅವರು ನೀಡಿರುವ ಸಲಹೆಯೇ ಹೊರತು ಅಪರಾಧವಲ್ಲ. ಆದರೆ ಕಲ್ಲಡ್ಕ ಪ್ರಭಾಕರ ಶಾಲೆಯಲ್ಲಿ ಬಾಬರಿ ಮಸೀದಿಯನ್ನು ಒಡೆಯುವ ಅಣುಕು ಪ್ರದರ್ಶನ ಪ್ರಚೋದನಾಕಾರಿಯಲ್ಲವೇ? ಎಂದವರು ಪ್ರಶ್ನಿಸಿದರು.

ಘಟನೆಯಲ್ಲಿ ಪೊಲೀಸರ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅವರು ಸಂವಿಧಾನ ಬದ್ಧ ಹಕ್ಕನ್ನು ದಮನಿಸುವ ಪ್ರಯತ್ನ ನಡೆಸಿದ್ದಾರೆ. ಅಮಾಯಕರ ಮೇಲಿನ ಪ್ರಕರಣವನ್ನು ಕೈಬಿಡಬೇಕು. ಈ ನಿಟ್ಟಿನಲ್ಲಿ ಅಮಾಯಕರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿದೆ ಎಂದರು.

ಘಟನೆಯ ಕುರಿತಂತೆ ತನಗೆ ಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ನಿನ್ನೆ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ನೀಡಿದ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂದರೆ ಅವರಿಗೆ ಇನ್ನಷ್ಟು ಜನರ ಸಾಯಬೇಕಿತ್ತೇ ಎಂದು ಪ್ರಶ್ನಿಸಿದರು.

ಬಿಜೆಪಿ ಒಳಗೆ ಯಡಿಯೂರಪ್ಪ ನಾಯಕತ್ವಕ್ಕೆ ವಿರೋಧವಿದೆ. ಅವರು ಅಸಮರ್ಥರು ಎಂಬುದಾಗಿ ಬಿಂಬಿಸಲು ಈ ಘಟನೆ ನಡೆದಿರಬಹುದೇ ಎಂಬ ಪ್ರಶ್ನೆಗೆ, ಅವರು ಅತ್ಯಂತ ದುರ್ಬಲರು. ಬಿಜೆಪಿಯಲ್ಲಿ ಅಸಮಾಧಾನ ಇದೆ. ಅದಕ್ಕಾಗಿಯೇ ಇದು ನಡೆದಿದ್ದರೂ ನಡೆದಿರಬಹುದು ಎಂದರು.

ಗೋಷ್ಠಿಯಲ್ಲಿ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಅಭಯಚಂದ್ರ ಜೈನ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಝಮೀರ್ ಅಹ್ಮದ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ನಾಯಕರಾದ ಕವಿತಾ ಸನಿಲ್, ಸಭಾಪತಿ, ಮಿಥುನ್ ರೈ, ಶಶಿಧರ ಹೆಗ್ಡೆ, ವಿನಯ ರಾಜ್, ಅಶೋಕ್ ಡಿ.ಕೆ., ಬಿ. ಇಬ್ರಾಹಿಂ, ಅಬ್ದುಲ್ ರವೂಫ್, ವಿಶ್ವಾಸ್ ಕುಮಾರ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.

ಅಘೋಷಿತ ತುರ್ತು ಪರಿಸ್ಥಿತಿ

ಪ್ರಧಾನಿ ನರೇಂದ್ರ ಮೋದಿಯವರು ಪೌರತ್ವ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಚಳವಳಿಗೆ ಕಾಂಗ್ರೆಸ್ ಕಾರಣ ಎಂದಿದ್ದಾರೆ. ಆದರೆ ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಯಾರ ಸರಕಾರವಿರುವುದು. ಒಂದು ವೇಳೆ ಕಾಂಗ್ರೆಸ್ ಮಾಡಿದ್ದರೆ ತಪ್ಪೇನು? ಜನವಿರೋಧಿ ಕಾಯ್ದೆ ಮಾಡಿದಾಗ ಅದನ್ನು ಪ್ರತಿಭಟಿಸಿ ಸತ್ಯ ಹೇಳುವುದು ವಿಪಕ್ಷ ಹಾಗೂ ರಾಷ್ಟ್ರೀಯ ಪಕ್ಷವಾಗಿ ನಮ್ಮ ಕರ್ತವ್ಯ.  ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಬಡವರು, ಅವಕಾಶ ವಂಚಿತರ ಬಗ್ಗೆ ಗೌರವ ಇಲ್ಲ ಎಂದರಲ್ಲದೆ, ಈ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲ

ಶುಕ್ರವಾರ ತಮ್ಮ ಭೇಟಿಗೆ ಅವಕಾಶ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ಫ್ಯೂ ಇರುವಾಗ ಮುಖ್ಯಮಂತ್ರಿ ಬರುತ್ತಾರೆ. ಉಪ ಮುಖ್ಯಮಂತ್ರಿ ಗೃಹ ಸಚಿವರು ಬರಬಹುದು. ಅಷ್ಟೇ ಅಲ್ಲ, ಶೋಭಾ ಕರಂದ್ಲಾಜೆಗೆ ಅವಕಾಶ ನೀಡಲಾಗುತ್ತದೆ. ಆದರೆ ವಿಪಕ್ಷ ನಾಯಕರಿಗೆ ಮಾತ್ರ ಅವಕಾಶ ನಿರಾಕರಿಸಲಾಗುತ್ತದೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ. ನಮ್ಮ ಅಧಿಕಾರ ಇದ್ದಾಗ ಗೋಲಿಬಾರ್ ನಡೆದಿಲ್ಲ. ಐದು ವರ್ಷದಲ್ಲಿ ಪೊಲೀಸರ ಬಳಿ ಗನ್‌ಗಳಿರುವುದೇ ಮರೆತು ಹೋಗಿತ್ತು. ಬಿಜೆಪಿಯವರು ರೈತರ ಮೇಲೆ ಗೋಲಿಬಾರ್ ನಡೆಸುತ್ತಾರೆ. ಇದೀಗ ಅಮಾಯಕರ ಮೇಲೆ. ಇದು ಸಂಪೂರ್ಣ ಸರಕಾರದ ವೈಫಲ್ಯ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಜಾರ್ಕಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ದೇಶದಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದರೆ ಜನ ದೇಶವನ್ನು ಬಿಜೆಪಿ ಮುಕ್ತಗೊಳಿಸುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ 17 ಜನ ಶಾಸಕರನ್ನು ಖರೀದಿಸಿ ಕೋಟ್ಯಂತ ರೂ. ಖರ್ಚು ಮಾಡಿ ಹಣದ ಹೊಳೆ ಹರಿಸಲಾಗಿದೆ ಎಂದರು.

ರಾಜ್ಯದ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಾಳಿ ಸುದ್ದಿಗೆ ಕಿವಿಗೊಡದಂತೆ ಹೇಳಿದು. ರೈತರ ದಿನಾಚರಣೆಯ ಜತೆಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭಾಶಯವನ್ನು ಅವು ಈ ಸಂದರ್ಭ ಜನತೆಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News