ಬೆಳ್ತಂಗಡಿ: ಡಿ. 26 ರಂದು ಮುಸ್ಲಿಂ ಒಕ್ಕೂಟ, ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ
ಬೆಳ್ತಂಗಡಿ: ಎನ್ ಆರ್ ಸಿ, ಸಿಎಎ ತಿದ್ದುಪಡಿ ಕಾಯ್ದೆ ವಿರುದ್ಧ ಬೆಳ್ತಂಗಡಿ ತಾಲೂಕಿನಲ್ಲಿ ತಾಲೂಕು ಸಂಯುಕ್ತ ಜಮಾಅತ್ ಮತ್ತು ತಾಲೂಕು ಮುಸ್ಲಿಂ ಒಕ್ಕೂಟ, ಸಮಸ್ತ ಮಹಲ್ ಫೆಡರೇಶನ್, ಎಸ್ಸೆಸ್ಸೆಫ್- ಎಸ್ ಕೆ ಎಸ್ಸೆಸ್ಸೆಫ್, ಸಿಪಿಐಎಂ ನೇತೃತ್ವದಲ್ಲಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಡಿ. 26ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡರು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಗುರುವಾರ ಅಪರಾಹ್ನ 3ಕ್ಕೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಯುವ ಈ ಬೃಹತ್ ಪ್ರತಿಭಟನೆಯಲ್ಲಿ ದ.ಕ. ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಎಸ್.ಎಸ್.ಎಫ್. ರಾಜ್ಯಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ ಕಿನ್ಯ, ಎಸ್.ಕೆ. ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರಳ್ಯ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಎಸ್ ಕೆ ಎಸ್ಸೆಸ್ಸೆಫ್ ತಾಲೂಕು ಅಧ್ಯಕ್ಷ ನಝೀರ್ ಅಝ್ಹರಿ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಉಜಿರೆ ಜಮಾಅತ್ ನ ಹೈದರ್ ನೀರ್ಸಾಲ್, ಸಿಪಿಐಎಂ ತಾ.ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ, ಮುಸ್ಲಿಂ ಒಕ್ಕೂಟದ ನಿಕಟ ಪೂರ್ವಾಧ್ಯಕ್ಷ ಚಾರ್ಮಾಡಿ ಹಸನಬ್ಬ, ಕೋಶಾಧಿಕಾರಿ ಬಿ.ಎಮ್ ಅಬ್ದುಲ್ ಹಮೀದ್ ಹಾಜಿ ಉಜಿರೆ ಉಪಸ್ಥಿತರಿದ್ದರು.