×
Ad

ಗಂಭೀರ ಸ್ಥಿತಿಯಲ್ಲಿ ಮುಂದುವರಿದ ಪೇಜಾವರಶ್ರೀ

Update: 2019-12-28 13:28 IST

ಉಡುಪಿ, ಡಿ. 28: ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಗಾಗಿ ಕಳೆದ ಡಿ.20ರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಆರೋಗ್ಯ ಇಂದೂ ಸಹ ಗಂಭೀರ ಸ್ಥಿತಿಯಲ್ಲೇ ಮುಂದುವರಿದಿದೆ. ಅವರ ಉಸಿರಾಟ ಹಾಗೂ ಪ್ರಜ್ಞಾ ಸ್ಥಿತಿಯಲ್ಲಿ ಯಾವುದೇ ಗಣನೀಯ ಸುಧಾರಣೆ ಕಂಡುಬಂದಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಶುಕ್ರವಾರ ತಡರಾತ್ರಿ ಶ್ರೀಗಳಿಗೆ ಎಂಆರ್‌ಐ ಸ್ಕಾನಿಂಗ್ ಮಾಡಲಾಗಿದ್ದು, ಅದರ ವರದಿಯ ಕುರಿತಂತೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಬಾಯಿ ಬಿಟ್ಟಿಲ್ಲ. ಅದನ್ನು ಪರಿಶೀಲಿಸಿ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು ಎಂದು ಮೂಲ ತಿಳಿಸಿದೆ.

ಅವರ ಪ್ರಜ್ಞಾ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಅವರು ಇನ್ನು ಕೂಡಾ ಜೀವರಕ್ಷಕ ಸಾಧನಗಳ ಅಳವಡಿಕೆಯಲ್ಲಿ ಇದ್ದಾರೆ. ಅವರಿಗೆ ಈಗಲೂ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅವರ ದೇಹಸ್ಥಿತಿಯಲ್ಲಿ ಇಳಿಮುಖ ಕಂಡುಬಂದಿದೆ ಎಂದು ಶುಕ್ರವಾರ ಸಂಜೆಯ ಬುಲೆಟಿನ್‌ನಲ್ಲಿ ತಿಳಿಸಲಾಗಿತ್ತು.

ಈ ನಡುವೆ ಪೇಜಾವರಶ್ರೀಗಳ ಭೇಟಿಗೆ ಬರುವ ಅತಿ ಗಣ್ಯರು, ವಿಐಪಿಗಳ ಸಂಖ್ಯೆ ಕಡಿಮೆಯಾಗುತಿದ್ದರೂ, ಇಂದೂ ಹಲವು ಮಂದಿ ಅವರ ಭೇಟಿಗಾಗಿ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದರು. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಹಾಸನ ಅರೆ ಮಾದನಹಳ್ಳಿ ಮಠದ ಶ್ರೀಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರಶ್ರೀಗ ಆರೋಗ್ಯದ ಕುರಿತು ವಿಚಾರಿಸಿದರು.

‘ಪೇಜಾವರಶ್ರೀಗಳು ಟ್ರೀಟ್‌ಮೆಂಟ್‌ನಲ್ಲಿದ್ದಾರೆ. ಅವರು ಹೀಗೆ ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ. ಅವರದ್ದು ಮಗುವಿನಂತಹ ಮುಗ್ದತೆ. ಶ್ರೀಗಳು ಬೇಗ ಗುಣಮುಖರಾಗಲಿ, ಇನ್ನಷ್ಟು ಧರ್ಮದ ಕೆಲಸ ಮಾಡುವಂತಾಗಲಿ’ ಎಂದ ತೇಜಸ್ವ ಸೂರ್ಯ, ವೈದ್ಯರೊಂದಿಗೆ ಮಾತನಾಡಿದ ಬಳಿಕ ಅವರು ಗುಣಮುಖರಾಗುವ ನಂಬಿಕೆ ನಮಗೆ ಮೂಡಿದೆ ಎಂದರು.

‘ಸ್ವಾಮೀಜಿ ಯಾವತ್ತೂ ಚಟುವಟಿಕೆಯಿಂದ ಇರುವವರು. ಯಾವತ್ತೂ ಹಾಸಿಗೆ ಹಿಡಿದವರಲ್ಲ. ಹೀಗಾಗಿ ಅವರು ಬೇಗ ಚೇತರಿಸುವಂತಾಗಲಿ. ಅವರು ಎಲ್ಲರಿಗೂ, ಎಲ್ಲಾ ಧರ್ಮೀಯರಿಗೂ ಬೇಕಾದವರು. ಮತ್ತೆ ಮೊದಲಿನಂತೆ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಮತ್ತೆ ಸಕ್ರೀಯರಾಗಲಿ’ ಎಂದು ರವಿ ಸುಬ್ರಹ್ಮಣ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

‘ಪೇಜಾವರಶ್ರೀ ಯಥಾಸ್ಥಿತಿಯಲ್ಲಿದ್ದಾರೆ. ಉಸಿರಾಟ ನಡೆಯುತ್ತಿರುವುದನ್ನು ನಾನು ಕಂಡೆ. ಎಂಆರ್‌ಐ ವರದಿಗಾಗಿ ಎಲ್ಲರೂ ಕಾಯುತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಾಗಿದೆ. ಭಗವಂತನ ಅನುಗ್ರಹದಿಂದ ಅವರು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.’ ಎಂದು ಪುತ್ತಿಗೆ ಶ್ರೀಗಳು ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News