×
Ad

'ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು ಸರಕಾರ ಬದ್ಧ'

Update: 2019-12-28 20:10 IST

ಕೋಟ, ಡಿ. 28: ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆ ಇಡೀ ದೇಶದಲ್ಲಿಯೇ ಸದೃಢವಾಗಿ ಬೆಳೆದಿರುವ ವ್ಯವಸ್ಥೆಯಾಗಿದೆ. ಇದನ್ನು ಇನ್ನಷ್ಟು ಬಲ ಪಡಿಸಲು ರಾಜ್ಯ ಸರಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ರಸ್ತೆಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೋಟತಟ್ಟ ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತರ ಪ್ರತಿಷ್ಠಾನದ ವತಿಯಿಂದ ಶನಿವಾರ ಕೋಟ ವಿವೇಕ ಕಾಲೇಜಿನ ಕ್ರೀಡಾಂಗಣದಲ್ಲಿ ಅವಿಭಜಿತ ದ.ಕ. ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಹೊಳಪು-2019’ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧಿಕಾರ ವಿಕೇಂದ್ರೀಕರಣದ ಆಶಯ ಬಹಳ ದೊಡ್ಡದು. ಗ್ರಾಮಸಭೆಗಳ ಮಟ್ಟದಿಂದಲೇ ಆಯಾ ಪ್ರದೇಶಗಳಿಗೆ ಅಗತ್ಯವಾದ ಯೋಜನೆಗಳು ರೂಪು ಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಮತ್ತು ಕಾರ್ಯನಿರ್ವಹಣಾ ಸ್ವಾತಂತ್ರ್ಯ ಇರಬೇಕು ಎಂದು ಅವರು ತಿಳಿಸಿದರು.

ಪಂಚಾಯತ್‌ರಾಜ್ ವ್ಯವಸ್ಥೆಯಿಂದ ಅಧಿಕಾರ ವಿಕೇಂದ್ರೀಕರಣ ಆಗಿದೆಯೇ ಅಥವಾ ಭ್ರಷ್ಟಾಚಾರದ ವಿಕೇಂದ್ರೀಕರಣ ಆಗಿದೆಯೇ ಎಂಬ ಜಿಜ್ಞಾಸೆಗಳು ನಡೆದಿವೆ. ಗ್ರಾಮ ಮಟ್ಟದಲ್ಲಿ ಯೋಜನೆಗಳು ರೂಪುಗೊಳ್ಳುವುದು ಮತ್ತು ಅನುಷ್ಠಾನಗೊಳ್ಳುವುದು ಸರಿಯಾದರೂ ಅವುಗಳ ಸೂಕ್ತ ಮೇಲ್ವಿಚಾರಣೆ ಇಲ್ಲದಿದ್ದರೆ ಉದ್ದೇಶಗಳು ವಿಫಲವಾಗುವ ಅಪಾಯಗಳಿವೆ. ಆದುದರಿಂದ ಸ್ಥಳೀಯ ಸಂಸ್ಥೆಗಳು ತಳಮಟ್ಟದಿಂದ ಬಲಗೊಳ್ಳಬೇಕು ಎಂದರು.

ಚುನಾಯಿತ ಸದಸ್ಯರು ನಿರ್ದಿಷ್ಟ ಕಾರ್ಯತಂತ್ರದ ಜೊತೆಗೆ ತತ್ವಾದರ್ಶದ ಚೌಕಟ್ಟನ್ನು ಹಾಕಿಕೊಳ್ಳಬೇಕು. ಸುಧಾರಣೆ, ದಕ್ಷತೆ, ಬದ್ಧತೆ ಮತ್ತು ಫಲಿತಾಂಶ ಆಧಾರಿತ ಅನುಷ್ಠಾನಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದಾಗ ಮಾತ್ರ ಅಧಿಕಾರ ವಿಕೇಂದ್ರೀಕರಣವನ್ನು ಸಮರ್ಥಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಜನಪ್ರತಿನಿಧಿಗಳೆಂದರೆ ಕೇವಲ ಅಧಿಕಾರಕ್ಕಾಗಿ ಹೋರಾಡುವವರು ಎಂಬ ಚಿತ್ರಣ ಜನರಲ್ಲಿ ಮೂಡಿರುವ ಈ ದಿನಗಳಲ್ಲಿ ಅವರೊಳಗಿನ ಪ್ರತಿಭೆ, ಸಾಮರ್ಥ್ಯ ಬೆಳಕಿಗೆ ತರುವ ಈ ಕಾರ್ಯಕ್ರಮ ಶ್ಲಾಘನೀಯ. ಜನಪ್ರತಿನಿಧಿಗಳ ದೈನಂದಿನ ಜಂಜಾಟ ಮರೆತು, ಭಿನ್ನಾಭಿಪ್ರಾಯಗಳನ್ನು ಮರೆತು ತಂಡವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಈ ಮೂಲಕ ದೊರೆತಿದೆ ಎಂದರು.

ಗ್ರಾಮ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಲು ಈ ಕಾರ್ಯ ಕ್ರಮ ಪ್ರೇರಣೆಯಾಗಲಿದೆ. ರಾಜಕೀಯ ಏನಿದ್ದರೂ ಚುನಾವಣೆ ಎದುರಿಸುವ ವರೆಗೆ ಇರಬೇಕು. ಆಯ್ಕೆಯಾದ ನಂತರ ಪಕ್ಷಭೇದ ಮರೆತು ಒಂದಾಗಿ ಗ್ರಾಮದ ಅಭಿವೃದ್ಧಿಗೆ ಎಲ್ಲರು ಶ್ರಮಿಸಬೇಕು. ಪ್ರತಿಯೊಬ್ಬರು ಈ ಸಿದ್ಧಾಂತಕ್ಕೆ ಬದ್ಧರಾಗಿರಬೇಕು ಎಂದು ಅವರು ತಿಳಿಸಿದರು.

ಗೌರವ ಸ್ವೀಕರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗ್ರಾಮಾಂತರ ಪ್ರದೇದ ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಿಸುವ ಕುರಿತು ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಪ್ರತಿಜ್ಞೆ ಮಾಡಬೇಕು. ಸರಕಾರ ನೀಡಿರುವ 20 ಲಕ್ಷ ರೂ. ಬಳಸಿಕೊಂಡು ಪ್ರತಿ ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ರಾಜ್ಯದ ಎಲ್ಲ 6021 ಗ್ರಾಪಂ ಕಟ್ಟಡಗಳಿಗೆ ಸೋಲಾರ್ ಆಳವಡಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದನ್ನು ಪ್ರತಿಯೊಬ್ಬರು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅತ್ಯುತ್ತಮ ಗ್ರಾಪಂ ಗಳಿಗೆ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ಮಾಜಿ ಸಚಿವ ಜಯ ಪ್ರಕಾಶ್ ಹೆಗ್ಡೆ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿಪಂ ಅಧ್ಯಕ್ಷ ದಿನಕರ ಬಾಬು ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು. ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ ವಹಿಸಿ ದ್ದರು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ತಾಪಂ ಸದಸ್ಯೆ ಜ್ಯೋತಿ ಕುಂದರ್, ಲಲಿತಾ, ಜಿಲ್ಲಾಧಿಕಾರಿ ಜಗದೀಶ್, ಜಿಪಂ ಸಿಇಒ ಪ್ರೀತಿ ಗೆಹ್ಲೊತ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಹಾಗೂ ದ.ಕ. ಜಿಲ್ಲೆಯ ಒಟ್ಟು 413 ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಪಥಸಂಚಲನ ದಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಸೂಪರ್ ಮಿನಿಟ್, ಗಾಯನ, ಛದ್ಮವೇಷ, 100 ಮೀಟರ್ ಓಟ, ಗುಂಡು ಎಸೆತ, ರಿಂಗ್ ಇನ್ ದ ವಿಕೆಟ್, ಮಡಕೆ ಒಡೆಯವುದು, ಹಗ್ಗ ಜಗ್ಗಾಟ, ತ್ರೋಬಾಲ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರಗಿದವು.

ಸಿಎಂ ತರಾತುರಿ ಕಾರ್ಯಕ್ರಮ

ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಏರುತ್ತಿದ್ದಂತೆ ಬಹಳ ಹೊತ್ತಿನಿಂದ ಪಥಸಂಚಲನ ನಡೆಸಲು ಬಿಸಿಲಿನಲ್ಲಿ ಕಾಯುತ್ತಿದ್ದ ಜನಪ್ರತಿನಿಧಿಗಳು, ಪಥ ಸಂಚಲನ ಆರಂಭಿಸಿದರು. ಆದರೆ ಗಡಿಬಿಡಿಯಲ್ಲಿದ್ದ ಮುಖ್ಯಮಂತ್ರಿ ಪಥ ಸಂಚಲನದ ವೀಕ್ಷಣೆಯನ್ನು ಬಿಟ್ಟು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆಗೆ ಮುಂದಾದರು.

ಆದರೆ ಇದಕ್ಕೆ ಸಿದ್ಧರಾಗಿಲ್ಲದ ಸಂಘಟಕರು ದೀಪಕ್ಕಾಗಿ ಪರದಾಡಿದರು. ಈ ಮಧ್ಯೆ ಕೆಲವು ಕ್ಷಣಗಳ ಕಾಲ ದೀಪದ ಎದುರು ನಿಂತಿದ್ದ ಸಿಎಂ, ಸಚಿವ ಕೋಟ ವಿರುದ್ಧ ಸಿಟ್ಟಿಗೆದ್ದರು. ಬಳಿಕ ಸಂಘಟಕರು ತಂದ ಬೆಂಕಿ ಪೊಟ್ಟಣವನ್ನು ತಾನೇ ಹಚ್ಚಿ ದೀಪ ಬೆಳಗಿಸಿದರು. ಬಳಿಕ ಸಿದ್ಧಪಡಿಸಿ ತರಲಾದ ಭಾಷಣವನ್ನು ಓದಿದ ಸಿಎಂ, ಬಲೂನ್ ಹಾರಿಸಲು ಕರೆದರೂ ಆಸಕ್ತಿ ತೊರಲಿಲ್ಲ. ಬಳಿಕ ಒತ್ತಾಯಕ್ಕೆ ಬಲೂನ್ ಹಾರಿಸಿ, ಅಲ್ಲಿಂದ ಹೊರಟೆ ಹೋದರು. ಹೀಗೆ ಸಿಎಂ ತರಾತುರಿಯಲ್ಲಿ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸಿ ಹೋದದ್ದು ಜನಪ್ರತಿನಿಧಿ ಗಳಲ್ಲಿ ಬೇಸರ ಮೂಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News