ಕೂಡಿ ಕಟ್ಟುವ ಕೆಲಸ

Update: 2019-12-30 09:48 GMT

ದಿನೇಶ್ ಅಮೀನ್ ಮಟ್ಟು

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಅಮೀನ್ ಮಟ್ಟು ಅವರು ನಾಡಿನ ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿರುವವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಹೊರಹೊಮ್ಮಿದ ಅಮೀನ್ ಮಟ್ಟು, ನಾಡಿನ ಪ್ರಮುಖಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಮಾತ್ರವಲ್ಲ, ಅಂಕಣಕಾರರಾಗಿಯೂ ಗುರುತಿಸಿಕೊಂಡವರು. ಬರಹಕ್ಕಷ್ಟೇ ಸೀಮಿತವಾಗಿ ಉಳಿಯದೆ, ಪ್ರಗತಿ ವಿರೋಧಿ ಶಕ್ತಿಗಳ ವಿರುದ್ಧ ಸಂಘಟಿತವಾಗಿ ಬೀದಿಗಿಳಿದು ಮಾತನಾಡುತ್ತಿರುವವರು.

ದಕ್ಷಿಣ ಕನ್ನಡ ಮೊದಲಿನಿಂದಲೂ ವಾಣಿಜ್ಯಮಯ ನೆಲ. ಮೂವತ್ತು ವರ್ಷಗಳಲ್ಲಿ ಈ ಜಿಲ್ಲೆ ಇನ್ನೊಂದು ಅಪಾಯಕಾರಿ ತಿರುವು ಪಡೆದಿದೆ. ವಾಣಿಜ್ಯಮಯ ದಕ್ಷಿಣ ಕನ್ನಡ, ಕೋಮುವಾದಿ ದಕ್ಷಿಣ ಕನ್ನಡ ಆಗಿದೆ. ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮುವಾದ ಮತ್ತು ಹೊಸ ಆರ್ಥಿಕ ನೀತಿಯ ಮೂಲಕ ಹುಟ್ಟಿಕೊಂಡ ಕ್ರೋನಿ ಬಂಡವಾಳವಾದ ಏಕಕಾಲಕ್ಕೆ ಪ್ರವೇಶಿಸಿದ ಪರಿಣಾಮದ ಫಲವನ್ನು ದೇಶ ಇಂದು ಉಣ್ಣುತ್ತಿದೆ. ಕೋಮುವಾದದ ಜೊತೆ ಕ್ರೋನಿ ಬಂಡವಾಳವಾದ ಸೇರಿಕೊಂಡರೆ ಏನಾಗಬಹುದೆಂಬುದಕ್ಕೆ ಇಂದಿನ ದಕ್ಷಿಣ ಕನ್ನಡ ಜೀವಂತ ಉದಾಹರಣೆ.

‘ನಾನು ದಕ್ಷಿಣ ಕನ್ನಡದವ; ಆದರೆ ಕೋಮು ವಾದಿಯಲ್ಲ - ಹೀಗೆ ತಮ್ಮನ್ನು ಪರಿಚಯಿಸಿ ಕೊಳ್ಳಬೇಕಾದ ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಜಿಲ್ಲೆಯ ಜನರಿದ್ದಾರೆ.

ಇತ್ತೀಚಿನವರೆಗೂ ಒಂದು ಕಾಲ ಇತ್ತು, ನಾನು ಮಂಗಳೂರಿನವ ಎಂದು ಹೇಳಿದರೆ ಸಾಕಿತ್ತು, ಗುರುತಿಲ್ಲದವರ ಮನೆಯೊಳಗೆ, ಮನಸ್ಸಿನೊಳಗೆ ಪ್ರವೇಶಿಸಲು ಬೇರೆ ವಿಸಿಟಿಂಗ್ ಕಾರ್ಡ್ ಬೇಡ ಇತ್ತು. ಮಂಗಳೂರಿನವರೆಂದರೆ ದೇಶ ಸುತ್ತಿದವರು, ಕೋಶ ಓದಿದವರು, ವಿಶಾಲಹೃದಯಿಗಳು, ಸಾಹಸಿಗಳು, ಸ್ವಾಭಿಮಾನಿಗಳು, ಪ್ರಾಮಾಣಿಕರು, ಉದ್ಯಮಶೀಲರು, ಪ್ರಗತಿಪರರು, ಸಂಸ್ಕಾರವಂತರು, ಆತಿಥ್ಯದಲ್ಲಿ ಎತ್ತಿದ ಕೈ, ಹೀಗೆ ಎಷ್ಟೊಂದು ಬಿರುದಾವಲಿಗಳು.

ಈ ಗುಣಧರ್ಮಗಳಿಂದಾಗಿಯೇ ಇಲ್ಲಿ ಹುಟ್ಟಿದ ಐದು ಬ್ಯಾಂಕುಗಳು ದೇಶಾದ್ಯಂತ ಗ್ರಾಹಕರ ವಿಶ್ವಾಸ ಗಳಿಸಿದ್ದು, ಇದರಿಂದಾಗಿಯೇ ದೇಶ-ವಿದೇಶದ ತಿಂಡಿಪೋತರು ಉಡುಪಿ ಹೊಟೇಲ್‌ಗಳು, ಕರಾವಳಿ ನಾನ್ ವೆಜ್ ರೆಸ್ಟೊರೆಂಟ್‌ಗಳನ್ನು ಅರಸಿಕೊಂಡು ಹೋಗುತ್ತಿರುವುದು, ಇವೆಲ್ಲ ಮಾರುಕಟ್ಟೆಯಲ್ಲಿ ಹೋಗಿ ಖರೀದಿ ಮಾಡಿದ ಖ್ಯಾತಿ ಅಲ್ಲ, ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಸಂಪಾದಿಸಿದ ಕೀರ್ತಿಕಿರೀಟಗಳೂ ಅಲ್ಲ.

ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ, ಬ್ರಾಹ್ಮಣ, ಬ್ಯಾರಿ, ಬಿಲ್ಲವ, ಕೊರಗ, ಮೊಗವೀರ, ಕ್ರಿಶ್ಚಿಯನರು ಕೂಡಿ ಕಟ್ಟಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಣಬಹುದು. ಇದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ದುಡ್ಡು ಮಾತ್ರ ಅಲ್ಲ ಜನರ ವಿಶ್ವಾಸಾರ್ಹತೆಯನ್ನೂ ಸಂಪಾದಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡು ಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?).

ಬೆಂಗಳೂರು ಜಿಲ್ಲೆ ಹೊರತುಪಡಿಸಿದರೆ ರಾಜ್ಯದ ಬೊಕ್ಕಸಕ್ಕೆ ಅತ್ಯಧಿಕ ತೆರಿಗೆ ನೀಡುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಾದರೂ ಇಲ್ಲಿನ ಜನ ತಮ್ಮ ಬದುಕಿಗಾಗಿ ಸರಕಾರವನ್ನು ಅವಲಂಬಿಸಿದವರಲ್ಲ. ಇವರಲ್ಲಿ ಹೆಚ್ಚಿನವರು ಸರಕಾರದ ಯೋಜನೆಗಳು, ಸಬ್ಸಿಡಿ, ಮೀಸಲಾತಿ ಇತ್ಯಾದಿ ಬಗ್ಗೆ ತಲೆಕೆಡಿಸಿಕೊಂಡವಲ್ಲ. ಸರಕಾರಿ ನೌಕರಿಯಲ್ಲಿಯೂ ಇವರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಬುದ್ಧಿವಂತರ ಈ ಜಿಲ್ಲೆಯ ಎಷ್ಟು ಮಂದಿ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿದ್ದಾರೆ? ಕಷ್ಟಪಟ್ಟು ದುಡಿಯಬೇಕು, ಚೆನ್ನಾಗಿ ದುಡ್ಡು ಮಾಡಬೇಕು, ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಊರಲ್ಲಿ ತಲೆ ಎತ್ತಿ ಎದೆಯುಬ್ಬಿಸಿ ಓಡಾಡಬೇಕು- ಇವಿಷ್ಟೇ ಇವರಿಗೆ ಗೊತ್ತಿರುವುದು. ಇದಕ್ಕಾಗಿ ಮುಂಬೈ, ದುಬೈ, ಕುವೈತ್, ಅಂಡಮಾನ್, ನಿಕೋಬಾರ್ ಎಲ್ಲಿಗೆ ಹೋಗಲೂ ಉಟ್ಟ ಉಡುಗೆಯಲ್ಲಿ ಸಿದ್ಧ.

ದಕ್ಷಿಣ ಕನ್ನಡದ ಜನ ವಲಸೆ ಹೋಗಲು ಸಾಮಾಜಿಕ, ಭೌಗೋಳಿಕ, ಮತ್ತು ಪ್ರಾಕೃತಿಕ ಕಾರಣಗಳಿವೆ. ಕಡಲು ಮತ್ತು ಘಟ್ಟಗಳ ಸಾಲುಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಅವಿಭಜಿತ ದಕ್ಷಿಣಕನ್ನಡದ ಎರಡು ಮೂಲ ವೃತ್ತಿಗಳಾದ ಕೃಷಿ ಮತ್ತು ಮೀನುಗಾರಿಕೆ ಎಂದೂ ಲಾಭದಾಯಕ ವಾಗಿರಲಿಲ್ಲ. ಇವೆರಡೂ ಮಳೆ ಮತ್ತು ಕಡಲಿನ ಜೊತೆ ನಡೆಸುವ ಜೂಜಾಟ, ಅನಿಶ್ಚಿತತೆ ಮತ್ತು ಅಸುರಕ್ಷತೆಯ ವೃತ್ತಿಗಳು. ಅಡಿಕೆ ಮತ್ತು ತೆಂಗು ಹೊರತುಪಡಿಸಿದರೆ ಮಳೆನೀರು ನಂಬಿದ ಉಳಿದ ಬೆಳೆಗಳ ಕೃಷಿ ಇಲ್ಲಿ ಎಂದೂ ಲಾಭದಾಯಕವಾಗಿರಲಿಲ್ಲ. ಈ ಸ್ಥಿತಿಯಲ್ಲಿ ಜನ ಸೋತು ಕಡಲಿಗೆ ಬಿದ್ದು ಸಾಯಬೇಕಿತ್ತು. ಇವರು ಸಾಯಲಿಲ್ಲ, ಕಡಲು ದಾಟಿಕೊಂಡು ಹೋಗಿ ಮುಂಬೈ, ದುಬೈ, ಕುವೈತ್ ಸೇರಿ ಬದುಕು ಗೆದ್ದರು.

ಪ್ರಾರಂಭದಲ್ಲಿ ಊರು ಬಿಟ್ಟು ಹೋದವರಲ್ಲಿ ಹೆಚ್ಚಿನವರು ನೆಲೆ ನಿಂತದ್ದು ಮುಂಬೈನಲ್ಲಿ, ಮೊದಲು ಊರು ಬಿಟ್ಟ ಭೂಮಾಲಕರಾದ ಬಂಟರು ಮತ್ತು ಬ್ರಾಹ್ಮಣರು ಹೊಟೇಲ್ ಗಳನ್ನು ಮಾಡಿದರೆ, ಅವರ ಬೆನ್ನಲ್ಲೇ ಬಡತನವನ್ನು ಗೆಲ್ಲಲು ಮತ್ತು ಅವಮಾನದಿಂದ ಮುಖ ಮುಚ್ಚಿಕೊಳ್ಳಲು ಊರು ಬಿಟ್ಟು ಹೋದ ಒಕ್ಕಲಿನ ಬಿಲ್ಲವರು ಧಣಿಗಳ ಹೊಟೇಲ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಎಲ್ಲರೂ ಕೂಡಿ ಹೊಟೇಲ್ ಉದ್ಯಮವನ್ನು ಕಟ್ಟಿ ಬೆಳೆಸಿದರು. ಇನ್ನೊಂದೆಡೆ ಅನಿಶ್ಚಿತ ಆದಾಯದ ಮೀನುಗಾರಿಕೆಯಿಂದಾಗಿ ಮೊಗವೀರ ಯುವಕರು ಕೂಡಾ ಊರು ಬಿಟ್ಟು ಮುಂಬೈ ಸೇರಿದರು.

ಇವರ ಜೊತೆಗೆ ಕೃಷಿ ಮತ್ತು ಮೀನುಗಾರಿಕೆಯ ಮೇಲೆಯೇ ನಿಂತಿರುವ ತಮ್ಮ ವ್ಯಾಪಾರ ಮಂಕಾಗುತ್ತಿರು ವುದನ್ನು ಗಮನಿಸಿದ ಮುಸ್ಲಿಮರು ಹೆಚ್ಚು ಆದಾಯದ ಉದ್ಯೋಗದ ಹುಡುಕಾಟದಲ್ಲಿ ಕೊಲ್ಲಿ ರಾಷ್ಟ್ರಗಳೆಡೆ ವಲಸೆ ಹೋದರು. ಕ್ರಿಶ್ಚಿಯನ್ನರು ಎಲ್ಲರಿಗಿಂತ ಮೊದಲು ಸಮುದ್ರ ಲಂಘನ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಹಿಂದೂಗಳು ಕೊಲ್ಲಿ ರಾಷ್ಟ್ರಗಳಲ್ಲಿ ಹೋಗಿ ನೆಲೆ ಕಂಡುಕೊಂಡಿದ್ದಾರೆ. (ಒಂಬತ್ತು ವರ್ಷಗಳ ಹಿಂದೆ ದುಬೈಯಿಂದ ಬರುತ್ತಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದಾಗ ಸಾವಿಗೀಡಾದವರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಹಿಂದೂಗಳು)

ಈ ರೀತಿ ಊರುಬಿಟ್ಟವರ ಸಂಪಾದನೆಯ ದುಡ್ಡಿನಿಂದಲೇ ಊರಲ್ಲಿನ ಮುಳಿಹುಲ್ಲಿನ ಮನೆಗಳು ಹೆಂಚು-ತಾರಸಿಗಳ ಮನೆಗಳಾಗಿ ಪರಿವರ್ತನೆಗೊಂಡದ್ದು, ತಂಗಿ-ತಮ್ಮಂದಿರು ಕಾಲೇಜು ಮೆಟ್ಟಿಲು ಹತ್ತಿದ್ದು, ತಂದೆ- ತಾಯಿಗಳು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದದ್ದು, ಲಕ್ಷಗಟ್ಟಲೆ ವರದಕ್ಷಿಣೆ ಕೊಟ್ಟು ಅಕ್ಕ-ತಂಗಿಯರ ಮದುವೆ ನಡೆದದ್ದು. ಹಳೆಯ ದೇವಸ್ಥಾನ-ದೈವಸ್ಥಾನಗಳ ಜೀರ್ಣೋದ್ಧಾರ ನಡೆದದ್ದು.

ದಕ್ಷಿಣ ಕನ್ನಡಿಗರ ಮೇಲೆ ಮೊದಲಿನಿಂದಲೂ ಅಂಟಿ ಕೊಂಡಿರುವ ಒಂದಷ್ಟು ಕುಖ್ಯಾತಿಗಳೆಂದರೆ ‘ಬಲು ಲೆಕ್ಕಾಚಾರದ ಮಂದಿ’, ‘ಶೋಮ್ಯಾನ್‌ಗಳು’, ‘ಸಾಮಾಜಿಕ ಸ್ಪಂದನ ಇಲ್ಲದ ಬೂರ್ಜ್ವಾಗಳು’ ಎನ್ನುವುದು ಮಾತ್ರ. ಆದರೆ ದ.ಕ.ಮಂದಿಯನ್ನು ‘ಕೂಪಮಂಡೂಕಗಳು’, ‘ಆಧುನಿಕತೆಯ ವಿರೋಧಿಗಳು’, ‘ಸಂಸ್ಕಾರಹೀನರು’, ‘ಅಪ್ರಾಮಾಣಿಕರು’ ಎಂದು ಟೀಕಿಸಿದ್ದು ಕಡಿಮೆ.

ನಾನು ಮೊಗವೀರ, ಬ್ಯಾರಿ, ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಪ್ರೀತಿ-ಪ್ರೇಮ, ಸ್ನೇಹ-ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು. ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್‌ಕ್ರೀಮ್ ಪಾರ್ಲರ್‌ಗಳಿಗೆ ಹೋಗುವುದು ಕೂಡಾ ನಡೆದಿತ್ತು.

ಆಗಿನ್ನೂ ಶಾಲೆಗಳಲ್ಲಿ ಓದುತ್ತಿದ್ದ ಮುಸ್ಲಿಮ್ ಹುಡುಗಿಯರಿಗೆ ಬುರ್ಕಾ ಇರಲಿಲ್ಲ, ಹಿಂದೂ ಹುಡುಗರ ಹಣೆಯಲ್ಲಿ ಕೇಸರಿ ನಾಮ, ಹೆಗಲಲ್ಲಿ ಕೇಸರಿ ಶಾಲುಗಳಿರಲಿಲ್ಲ. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಪ್ರೀತಿ-ಸ್ನೇಹ ಸಂಬಂಧಗಳ ಗಾಳಿಸುದ್ದಿಗಳು ಆಗಲೂ ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು. ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ ಮತ್ತು ಜಗಳ ಎರಡನ್ನೂ ಮಾಡುತ್ತಿ ರಲಿಲ್ಲ. ಯಾಕೆಂದರೆ ಅಂತಹ ಪ್ರಕರಣಗಳು ಹಿಂದೂಗಳ ನಡುವೆ ಕೂಡಾ ನಡೆದು ಹೊಡೆದಾಟ, ಜಗಳಗಳು ನಡೆಯುತ್ತಿತ್ತು.

ಮೂವತ್ತು ವರ್ಷಗಳ ಹಿಂದೆ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು. ಅವರು ಕೂಡಾ ಈಗ ಸುಖವಾಗಿದ್ದಾರೆ.

ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿ ಯಲ್ಲಿ ರಕ್ತ ಹರಿಯುತ್ತಿದೆ. ಮುಂಬೈ, ದುಬೈ, ಕುವೈತ್‌ಗಳಲ್ಲಿಯೂ ಹಿಂದಿನ ಉದ್ಯೋಗಾವಕಾಶ ಇಲ್ಲ. ಹೊರದೇಶಗಳಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಹೊರಟವರಿಗೆ ವೀಸಾ ಸಿಗುತ್ತಿಲ್ಲ, ಪಾಸ್‌ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್‌ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತು ಹಾಕುವುದು ಕಷ್ಟ. ಈ ಚಕ್ರವ್ಯೆಹದೊಳಗೆ ಸಿಕ್ಕಿಹಾಕಿಕೊಂಡ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ, ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ. ವಿನಾಕಾರಣ ಪ್ರೀತಿ ಮಾಡುತ್ತಿದ್ದವರು, ವಿನಾಕಾರಣ ದ್ವೇಷ ಮಾಡುತ್ತಿದ್ದಾರೆ.

ನೀವು ಮುಸ್ಲಿಮರನ್ನು ಯಾಕೆ ದ್ವೇಷಿಸುತ್ತೀರಿ? ಎಂಬ ಸರಳ ಪ್ರಶ್ನೆಯನ್ನು ಇತ್ತೀಚೆಗೆ ನನಗೆ ಗೊತ್ತಿರುವ ಊರಿನ ಕೆಲವು ಹಿರಿಯ-ಕಿರಿಯರ ಮುಂದಿಟ್ಟೆ. ಯಾರೂ ಮಾತನಾಡಲಿಲ್ಲ. ನಾನೇ ಮುಂದುವರಿಸಿದೆ ‘ನೋಡಿ ನಿಮಗೆಲ್ಲ ಒಳಗಿಂದೊಳಗೆ ಮುಸ್ಲಿಮರ ಬಗ್ಗೆ ದ್ವೇಷ ಇಲ್ಲದೆ ಇದ್ದರೂ ಅಸಹನೆ ಇದೆ ಅಲ್ವಾ?’ ಎಂದು ಕೇಳಿದೆ. ಕೆಲವರು ಹೌದು ಎನ್ನುವಂತೆ ತಲೆಯಾಡಿಸಿದರೂ ಬಾಯಿ ಬಿಟ್ಟು ಏನೂ ಹೇಳಲಿಲ್ಲ. ಮತ್ತೆ ನಾನೇ ಮುಂದುವರಿಸಿದೆ. ‘ನೋಡಿ, ಇಷ್ಟು ವರ್ಷಗಳಿಂದ ಈ ಊರಲ್ಲಿದ್ದೀರಿ, ಇಲ್ಲಿಯೇ ನಿಮಗೆ ಗೊತ್ತಿರುವ ಮುಸ್ಲಿಮ್ ಕುಟುಂಬಗಳಿವೆ. ನಿಮ್ಮೂರಿನ ಮುಸ್ಲಿಮ್ ಯುವಕರು ಹಿಂದೂ ಹುಡುಗಿಯನ್ನು ಛೇಡಿಸಿದ, ಮಾನಹಾನಿ ಮಾಡಿದ ಎಷ್ಟು ಪ್ರಕರಣಗಳು ನಡೆದಿವೆ?’ ಎಂದು ಪ್ರಶ್ನಿಸಿದೆ. ಗುಂಪಲ್ಲಿರುವ ಕೆಲವು ಯುವಕರು ನಿಧಾನ ತಲೆ ಎತ್ತಿದರು. ‘ಅಷ್ಟು ಧೈರ್ಯ ಬೇಕಲ್ಲಾ ಅವರಿಗೆ, ನಾವೇನು ಬಳೆ ತೊಟ್ಟುಕೊಂಡಿದ್ದೆವೇಯಾ?’ ಎಂದು ಸಿಡಿದರು.

‘ನಿಮ್ಮೂರಿನ ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಪ್ರೀತಿಯಾ ನಿಮಗೆ? ಹಾಗಿದ್ದರೆ ಇದೇ ಊರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಹಿಂದೂ ಯುವಕರೇ ಛೇಡಿಸಿದ, ಕಾಡಿಸಿದ, ವಂಚಿಸಿದ ಹತ್ತು ಪ್ರಕರಣಗಳನ್ನು ನಾನು ಹೇಳ್ತೇನೆ. ಅವರನ್ನೇನು ಮಾಡ್ತೀರಿ?’ ಎಂದು ಯುವಕರನ್ನು ಕೇಳಿದೆ, ಎಲ್ಲರೂ ತಲೆ ತಗ್ಗಿಸಿದರು.

ಅಷ್ಟರಲ್ಲಿ ಚರ್ಚೆಯ ವಿಷಯ ಹಿರಿಯರ ತಲೆಯ ಒಳಕ್ಕೆ ಇಳಿಯಲಾರಂಭಿಸಿತ್ತು, ಅವರೆಲ್ಲರೂ ‘ನಮ್ಮೂರಿನ ಮುಸ್ಲಿಮರು ಅಂತಹವರಲ್ಲ ಬಿಡಿ, ಎಷ್ಟು ವರ್ಷಗಳ ಒಡನಾಟ ನಮ್ಮದು. ಯುಪಿ-ಬಿಹಾರ ಯಾಕೆ? ಕೇರಳದಲ್ಲಿಯೂ ಮುಸ್ಲಿಮ್ ಟೆರರಿಸ್ಟ್‌ಗಳಿದ್ದಾರಂತಲ್ಲಾ? ನೋಡಿ ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಬಿಡೋದಿಲ್ಲ ಅಂದ್ರೆ ಹೇಗೆ, ಪುಲ್ವಾಮ ನಡೆದದ್ದು ಯಾರ ಕುಮ್ಮಕ್ಕಿನಿಂದ? ಎಲ್ಲ ಭಯೋತ್ಪಾದಕರೂ ಅವರೇ ಅಲ್ವಾ? ಅವರಿಂದಾಗಿ ಇಲ್ಲಿನ ಮುಸ್ಲಿಮರನ್ನು ನಂಬದ ಹಾಗಾಗಿದೆ ಎಂದೆಲ್ಲ ಒಬ್ಬ ಯುವಕ ಉಸಿರು ಬಿಗಿಹಿಡಿದು ಬಾಯಿ ಪಾಠ ಮಾಡಿಕೊಂಡವರಂತೆ ಒದರಿದ. ಇವೆಲ್ಲ ನೀನು ಎಲ್ಲಿ ತಿಳಿದುಕೊಂಡದ್ದು? ಎಂದು ಅವನನ್ನು ಕೇಳಿದೆ. ಅವನು ಉತ್ತರಿಸಲಿಲ್ಲ, ಅವನ ಕೈಯಲ್ಲಿ ಮೊಬೈಲ್ ಇತ್ತು.

ಹಿಂದೆ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆಗಳು ಕಳೆದ 30-40 ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಲು ಸಾಧ್ಯವೇ? ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು? ಮತಾಂತರವೇ ಕಾರಣವೆಂದಾದರೆ ಹಿಂದೂಗಳು ಕ್ರಿಶ್ಚಿಯನರನ್ನು ದ್ವೇಷಿಸ ಬೇಕಿತ್ತು, ಮುಸ್ಲಿಮರನ್ನಲ್ಲ. ಇಲ್ಲಿ ದೊಡ್ಡ �

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News