ಅಸೈಗೋಳಿ: ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಮಂಗಳೂರು, ಡಿ.30: ಸ್ತನ ಕ್ಯಾನ್ಸರ್ ಸಹಿತ ಯಾವುದೇ ಕಾಯಿಲೆ ಗುಣಪಡಿಸುವುದು ಕಷ್ಟಕರವಲ್ಲ, ಆದರೆ ಮೊದಲ ಹಂತದಲ್ಲೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುನಂದಾ ಬಿ.ಅಸೈಗೋಳಿ ಅಭಿಪ್ರಾಯಪಟ್ಟರು.
ಜನವಾದಿ ಮಹಿಳಾ ಸಂಘಟನೆ ಹಾಗೂ ನಿಟ್ಟೆ ವಿವಿಯ ಅಂಗಸಂಸ್ಥೆ ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಸೈಗೋಳಿಯ ಯುವಕ ಮಂಡದಲ್ಲಿ ರವಿವಾರ ನಡೆದ ‘ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚಿನವರಲ್ಲಿ ಅರಿವಿನ ಕೊರತೆ ಇರುವುದರಿಂದ ಇಂದು ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ವಿಷಯದಲ್ಲಿ ನಡೆಯುವ ಕಾರ್ಯಾಗಾರಗಳು, ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಅರಿವು ಸಿಗಲಿದ್ದು, ಅದನ್ನು ಇನ್ನಿತರರ ಜೊತೆ ಹಂಚಿಕೊಂಡಾಗ ಇಂತಹ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಸುನಂದಾ ನುಡಿದರು.
ಮುಖ್ಯ ಅತಿಥಿಗಳಾಗಿ ಅಸೈಗೋಳಿ ಗುಳಿಗ-ಕೊರಗಜ್ಜ ಸೇವಾ ಸಮಿತಿಯ ಮೊಕ್ತೇಸರ ಸಂಕಪ್ಪಕರ್ಕೇರಾ, ಅರ್ಚಕ ರತ್ನಾಕರ ಕರ್ಕೇರ, ಕೋಟೆಕಾರ್ ಸೇವಾ ಸಹಕಾರಿ ಬ್ಯಾಂಕ್ನ ವ್ಯವಸ್ಥಾಪಕಿ ವಾಣಿ ಲೋಕಯ್ಯ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿಮಲಾ ಪಾಲ್ಗೊಂಡಿದ್ದರು.