ಪೇಜಾವರ ಸ್ವಾಮೀಜಿಗೆ ಶ್ರದ್ಧಾಂಜಲಿ
ಉಡುಪಿ, ಡಿ.31: ಇತ್ತೀಚೆಗೆ ನಿಧನರಾದ ಉಡುಪಿ ಪೇಜಾವರ ಸ್ವಾಮೀಜಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಕನಕದಾಸ ಅಧ್ಯಯನ ಸಂಶೋಧನ ಪೀಠದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ದ.ಕ ಹಾಗೂ ಉಡುಪಿ ಪರಿಸರ ಹೋರಾಟಕ್ಕೆ ಬೆಂಬಲವಾಗಿ ನಿಂತ ಇವರು, ಪಾಜಕ ಮತ್ತು ಕುದುರೆಮುಖದಲ್ಲಿ ನಡೆದಂತಹ ಪರಿಸರ ಚಳುವಳಿಗಳಲ್ಲಿ ಮಹತ್ತರ ಪಾತ್ರ ವಹಿಸಿದರು. ಸಂತರಾಗಿ, ಯತಿಯಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅವರ ನಡೆ, ನುಡಿ ಚರಿತ್ರೆಯಲ್ಲಿ ಚಿರಕಾಲ ಉಳಿಯಲಿದೆ ಎಂದರು.
ಆಡಳಿತಾಧಿಕಾರಿ ಪ್ರೊ.ಎಂ.ಎಲ್.ಸಾಮಗ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಸದಾ ಪ್ರೋತ್ಸಾಹಿಸುವ ಹಿರಿಮೆ ಸ್ವಾಮೀಜಿಯದ್ದು. ಎಲ್ಲಾ ವರ್ಗದ ಜನರನ್ನು ಪ್ರೀತಿಸಿ ಒಳಗೊಳ್ಳುವ ವಿಶೇಷ ಗುಣ ಅವರದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಿಬ್ಬಂದಿ ವೆಂಕಟೇಶ್ ಹಾಗೂ ಗುರುಪ್ರಸಾದ್, ನಾಗರಾಜ, ಸುಶ್ಮಿತಾ ಎ., ಸುಲೋಚನಾ, ಭಾರತಿ ಮೊದಲಾದವರು ಉಪಸ್ಥಿತರಿದ್ದರು.