ಮಂಗಳೂರಿನಲ್ಲಿ ಪೊಲೀಸರಿಂದ ವಿನಾಕಾರ ಲಾಠಿಜಾರ್ಜ್-ಗೋಲಿಬಾರ್ : ಆರೋಪ
ಮಂಗಳೂರು, ಡಿ.31: ಎನ್ಆರ್ಸಿ ಮತ್ತು ಸಿಎಎ ಕುರಿತಂತೆ ಡಿ.19ರ ಪ್ರತಿಭಟನೆಯನ್ನು ಮುಂದೂಡಿದ ಬಗ್ಗೆ ಮಾಹಿತಿ ಇಲ್ಲದ ನೂರಿನ್ನೂರು ಮಂದಿ ಡಿಸಿ ಕಚೇರಿ ಮುಂದೆ ಜಮಾಯಿಸಿದ್ದರು. ವಿಷಯ ಮನದಟ್ಟು ಮಾಡಿಕೊಂಡು ಅವರನ್ನು ವಾಪಸ್ ಕಳುಹಿಸುವ ಅವಕಾಶವಿದ್ದರೂ ಕೂಡ ಪೊಲೀಸರು ಲಾಠಿಜಾರ್ಜ್-ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದಾರೆ. ಮಂಗಳೂರಿನ ಹಿಂಸಾಚಾರಕ್ಕೆ ಪೊಲೀಸರೇ ಕಾರಣ ಎಂದು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಅರೋಪ ಕೇಳಿ ಬಂದಿದೆ.
ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ ಕಾರಣ ಹಿಂಸಾಚಾರ ನಡೆಯಿತು. ಲಾಠಿಜಾರ್ಜ್, ಗೋಲಿಬಾರ್ ನಡೆಸುವ ಅಗತ್ಯವೇ ಇರಲಿಲ್ಲ. ಗೋಲಿಬಾರ್ ನಡೆಸುವಾಗ ಅನುಸರಿಸಬೇಕಾದ ನಿಯಮವನ್ನೂ ಉಲ್ಲಂಘಿಸಿದ್ದಾರೆ. ಸೊಂಟದ ಕೆಳಭಾಗಕ್ಕೆ ಗುಂಡೇಟು ಹಾಕುವ ಬದಲು ಕಣ್ಣು, ಬೆನ್ನಿಗೆ ಗುಂಡೇಟು ಹಾಕಲಾಗಿದೆ. ಹೀಗೇಕೆ ಆಯಿತು ಎಂಬುದರ ಬಗ್ಗೆ ಸಂಶಯವಿದೆ. ಈ ಬಗ್ಗೆಯೂ ತನಿಖೆ ಆಗಬೇಕಿದೆ ಎಂದು ಪ್ರತಿನಿಧಿಗಳು ಒತ್ತಾಯಿಸಿದರು.
ಅಂದು ಪೊಲೀಸರ ದೌರ್ಜನ್ಯ ಮಿತಿ ಮೀರಿತ್ತು. ಪೊಲೀಸರು ಸಂಯಮ ಪಾಲಿಸಿದ್ದರೆ, ಸೇರಿದ್ದ ಜನರಿಗೆ ಮನವರಿಕೆ ಮಾಡಿಕೊಟ್ಟಿ ದ್ದರೆ ಇಬ್ಬರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಪೊಲೀಸರ ಗುಂಡೇಟು, ಲಾಠಿ ಏಟಿನಿಂದ ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಖರ್ಚುವೆಚ್ಚ ಮಿತಿ ಮೀರುತ್ತಿವೆ. ಅದನ್ನು ಪಾವತಿಸಲಾಗದೆ ಸಮಸ್ಯೆಗೊಳಗಾಗಿದ್ದಾರೆ. ಗುಂಡೇಟಿಗೆ ಬಲಿಯಾದವರಿಗೆ ಪರಿಹಾರ ಧನ ಘೋಷಿಸಿ ವಾಪಸ್ ಪಡೆದಿರುವುದು ಕೂಡ ಸರಿಯಲ್ಲ. ಬಲಿಯಾದ ಕುಟುಂಬಸ್ಥ ರಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ಧನ ನೀಡಬೇಕು. ಪೊಲೀಸರು ಅನೇಕ ಅಮಾಯಕರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದರು.
ಮಂಗಳೂರಿನ ಹಿಂಸಾಚಾರದಿಂದ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಮತ್ತು ತೊಂದರೆಗೀಡಾಗಿದ್ದಾರೆ ಎಂದು ಆರೋಪಿಸಿದ ಪ್ರತಿನಿಧಿಗಳು ಹಿಂಸಾಚಾರದ ಕೆಲವು ಫೋಟೋಗಳನ್ನು ಗೃಹ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯುಟಿ ಖಾದರ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಸಂಜೀವ ಮಠಂದೂರು, ಹರೀಶ್ ಪೂಂಜಾ, ಎಸ್.ಅಂಗಾರ, ರಾಜೇಶ್ ನಾಯ್ಕಿ ಉಳೆಪ್ಪಾಡಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ, ಎಸ್ಪಿ ಲಕ್ಷ್ಮಿಪ್ರಸಾದ್, ಅಪರ ಜಿಲ್ಲಾಧಿಕಾರಿ ರೂಪಾ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್, ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಯೆನೆಪೊಯ ವಿವಿಯ ಕುಲಪತಿ ಹಾಜಿ ವೈ. ಅಬ್ದುಲ್ಲಾ ಕುಂಞಿ, ಇಬ್ರಾಹೀಂ ಕೋಡಿಜಾಲ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮುಸ್ಲಿಂ ಸಂಘಟನೆಯ ಪ್ರತಿನಿಧಿಗಳಾದ ಬಿಎಂ ಮುಮ್ತಾಝ್ ಅಲಿ, ಯಾಕೂಬ್ ಸಅದಿ ನಾವೂರು, ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್ ಕೊಡಾಜೆ, ಮುಹಮ್ಮದ್ ಕುಂಞಿ, ಅಶ್ರಫ್ ಕಿನಾರ, ಇಕ್ಬಾಲ್ ಮೂಲ್ಕಿ, ಹಿಂದೂ ಸಂಘಟನೆಗ ಮುಖಂಡ ಜಗದೀಶ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.
ಶಾಂತಿ ಕಾಪಾಡಿ: ಬೊಮ್ಮಾಯಿ
ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಹೇಳಿಕೆಗಳನ್ನು ಸಂಯಮ ಚಿತ್ತದಿಂದ ಆಲಿಸಿದ ಬಸವರಾಜ ಬೊಮ್ಮಾಯಿ ‘ಸಮಾಜದಲ್ಲಿ ಶಾಂತಿ ಮುಖ್ಯ. ಯಾರೂ ಅಶಾಂತಿಗೆ ಎಡೆಮಾಡಿಕೊಡಬೇಡಿ. ಘಟನೆಯ ಸತ್ಯಾಂಶ ಹೊರಬೀಳಬೇಕು ಎನ್ನುವ ಉದ್ದೇಶ ದಿಂದಲೇ ಮ್ಯಾಜಿಸ್ಟ್ರೀರಿಯಲ್ ತನಿಖೆ ನಡೆಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ದ.ಕ. ಜಿಲ್ಲೆಯನ್ನು ಹಲವಾರು ಹಿರಿಯರು ಕಟ್ಟಿ ಬೆಳೆಸಿ ಇಲ್ಲಿನ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದು, ಈ ಪರಂಪರೆಯನ್ನು ಎತ್ತಿಹಿಡಿದು ಜನತೆ ಶಾಂತಿ ನೆಮ್ಮದಿಯನ್ನು ಮುಂದುವರಿಸಲು ಸಹಕರಿಸಬೇಕು ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ ನೀಡಿದರು.