ಚಾಲನಾ ಪರವಾನಿಗೆ ಮುನ್ನ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ಅಗತ್ಯ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಜ.5: ಅಂಕಿ ಅಂಶಗಳ ಪ್ರಕಾರ ಶೇ.78ರಷ್ಟು ಅಪಘಾತಗಳಿಗೆ ವಾಹನ ಚಾಲಕರೆ ಕಾರಣವಾಗಿದ್ದು, ಸಾರಿಗೆ ಇಲಾಖೆಯ ಮೂಲಕ ವಾಹನ ಚಾಲನಾ ಪರವಾನಗಿ ನೀಡುವ ಮೊದಲು ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಪಾಲನೆ ಕುರಿತು ವಿವರವಾದ ತರಬೇತಿ ನೀಡಬೇಕು. ಆ ಮೂಲಕ ಅಪಘಾತ ಪ್ರಕರಣಗಳು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಅಪಘಾತದಿಂದ ಮರಣ ಹೊಂದುವ ವ್ಯಕ್ತಿಯ ಕುಟುಂಬ ಎದುರಿಸುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಇಲ್ಲದವರು ಹಾಗೂ ವಾಹನ ಚಾಲನೆಗೆ ಸೂಕ್ತ ಅರ್ಹತೆ ಇಲ್ಲದ ವ್ಯಕಿಗಳು ಚಾಲನಾ ಪರವಾನಗಿ ಪಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವ ಅ್ಯರ್ಥಿಗಳಿಗೆ ಸುರಕ್ಷಿತ ಸಂಚಾರಿ ನಿಯಮಗಳ ಪಾಲನೆ ವಿವರವಾದ ಮಾಹಿತಿಯನ್ನು ಹಾಗೂ ಅಪಘಾತದಿಂದ ಮರಣ ಹೊಂದುವ ಕುಟುಂಬಗಳು ಎದುರಿಸಬಹುದಾದ ಸಂಕಷ್ಟಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಇದೆ. ಆದರೂ ಸಹ ಸುರಕ್ಷಿತ ಸಂಚಾರ ನಿಯಮಗಳ ಪಾಲನೆ ಕುರಿತು ಮಾಹಿತಿ ನೀಡಲು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸೂಕ್ತ ಅ್ಯರ್ಥಿ ಯನ್ನು ನೇಮಕ ಮಾಡಿಕೊಂಡು ಮಾಹಿತಿ ನೀಡಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಸೂಕ್ತ ಎಚ್ಚರಿಕಾ ಕ್ರಮಗಳನ್ನು ಅಳವಡಿಸುವ ಕುರಿತು ಕ್ರಿಯಾ ಯೋಜನೆ ರೂಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಅಗತ್ಯವಿರುವಲ್ಲಿ ಜೀಬ್ರಾ ಕ್ರಾಸ್ ಅಳವಡಿಸಲು ಸೂಚಿಸಲಾಗಿದೆ. ಮೀನುಗಾರಿಕಾ ವಾಹನಗಳು ರಸ್ತೆ ಯಲ್ಲಿ ನೀರು ಚೆಲ್ಲಿದರೆ ದಂಡ ವಿಧಿಸುವುದರ ಜೊತೆಗೆ ಅವರು ಆ ನೀರನ್ನು ಸೂಕ್ತ ಪ್ರದೇಶದಲ್ಲಿ ವಿಸರ್ಜಿಸಲು ಸ್ಥಳ ನಿಗಧಿಪಡಿಸೇಕಾಗಿದೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಕೆಎಂಸಿಯ ಡಾ.ಕೃಷ್ಣ ಪ್ರಸಾದ್ ಮಾತನಾಡಿ, ಮಾನವ ತಪ್ಪಿನಿಂದಲೇ ಹೆಚ್ಚಿನ ಅಪಘಾತ ಗಳು ಸಂಭವಿಸುತ್ತಿದ್ದು, ದೇಶದಲ್ಲಿ ಪ್ರತಿ ವರ್ಷ ಇತರೆ ಕಾರಣಗಳಿಂದ ಮರಣ ಹೊಂದುವವರಿಗಿಂತ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ. ಇದರಲ್ಲಿ 18-35 ವರ್ಷದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿ ದ್ದಾರೆ. ಇದರಿಂದ ಇಡೀ ಕುಟುಂಬ ಆಧಾರಸ್ಥಂವನ್ನು ಕಳೆದುಕೊಳ್ಳುವಂತಾ ಗಿದೆ, ಯುವಜನತೆ ಈ ಬಗ್ಗೆ ಎಚ್ಚೆತುತಿಕೊಳ್ಳಬೇಕಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಬಸ್ ಮಾಲಕರು, ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿ ಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಪಘಾತ ಕಡಿಮೆ, ಸಾವು ಅಧಿಕ !
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗಿದ್ದರೂ ಅದರಿಂದ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ. 2017ರಲ್ಲಿ 231 ಅಪಘಾತ ದಲ್ಲಿ 225, 2018ರಲ್ಲಿ 218 ಅಪಘಾತದಲ್ಲಿ 228 ಮತ್ತು 2019ರಲ್ಲಿ 246 ಅಪಘಾತದಲ್ಲಿ 259 ಮಂದಿ ಮೃತಪಟ್ಟಿದ್ದಾರೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದರು.
ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಯುವ ಜನತೆಯೇ ಅಧಿಕವಾಗಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸಿದರೆ, ಅವರ ಪೋಷಕರಿಗೂ ಶಿಕ್ಷೆ ವಿಧಿಸಲು ಕಾನೂನಿಲ್ಲಿ ಅವಕಾಶ ಇದೆ. ಕೇವಲ ದಂಡ ವಿಧಿಸುವುದರಿಂದ ಮಾತ್ರವೇ ಅಪಘಾತಗಳನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಸ್ವಯಂ ಪ್ರೇರಿತವಾಗಿ ಕಾನೂನು ಮತ್ತು ಸುರಕ್ಷತಾ ನಿಯಮ ಪಾಲಿಸುವುದರಿಂದ ಅಪಘಾತ ನಿಯಂತ್ರಿಸಬಹುದು ಎಂದರು.