×
Ad

ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಆಚಾರ್ ಆತ್ಮಹತ್ಯೆ

Update: 2020-01-07 18:44 IST

ಮಂಗಳೂರು, ಜ.7: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿ ಜನಮನ್ನಣೆ ಪಡೆದಿದ್ದ ಸುಬ್ರಹ್ಮಣ್ಯ ಆಚಾರ್ (43) ನಗರದ ಕುಲಶೇಖರದ ಸ್ನೇಹಿತನ ಮನೆಯಲ್ಲಿ ಮಂಗಳವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಬ್ರಹ್ಮಣ್ಯ ಆಚಾರ್ ಮೂಲತಃ ಶಿವಮೊಗ್ಗ ಹೊಸನಗರ ತಾಲೂಕಿನ ‘ನಗರ’ ಎಂಬ ಊರಿನವರಾಗಿದ್ದು, ಭಾಗವತರಾಗಿ ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗಲೇ ದಿಢೀರನೆ ಆತ್ಮಹತ್ಯೆ ಮಾಡಿಕೊಂಡಿರುವುದು ಯಕ್ಷಾಭಿಮಾನಿಗಳಿಗೆ ಆಘಾತ ಮೂಡಿಸಿದೆ.

ಅವರು ಸೋಮವಾರವಷ್ಟೇ ಮಾರಣಕಟ್ಟೆಯಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿ ಮಂಗಳವಾರ ಬೆಳಗ್ಗೆ ಮಂಗಳೂರಿನ ಕುಲಶೇಖರದ ಸ್ನೇಹಿತನ ಮನೆಗೆ ಆಗಮಿಸಿದ್ದರು. ಆಚಾರ್ ಅವರಿಗೆ ವಿಪರೀತ ಸಾಲವಿತ್ತೆಂದು ಮಾಹಿತಿ ಲಭ್ಯವಾಗಿದೆ. ಸಾಲಗಾರರ ಕಾಟದಿಂದ ಮಾನಸಿಕ ಖಿನ್ನತೆಗೊಳಗಾದ ಅವರು, ಮದ್ಯಸೇವನೆ ಆರಂಭಿಸಿದ್ದರು. ದಿನದಿಂದ ದಿನಕ್ಕೆ ಖಿನ್ನತೆಗೊಳಗಾದ ಆಚಾರ್ ಮಂಗಳವಾರ ಬೆಳಗ್ಗೆ 11:30ಕ್ಕೆ ಕುಲಶೇಖರದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಚಾರ್ ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಮಧ್ಯಾಹ್ನ 2:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಚಾರ್ ಕುಟುಂಬಸ್ಥರು ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಧಾನ ಭಾಗವತ

ಸುಬ್ರಹ್ಮಣ್ಯ ಭಾಗವತರು ಚಿಕ್ಕ ವಯಸ್ಸಿನಲ್ಲೇ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದ್ದರು. ಅಲ್ಲಿ ಮೇರು ಕಲಾವಿದರಾಗಿದ್ದ ಚಂದ್ರಹಾಸ ಪುರಾಣಿಕ್, ನೀಲಾವರ ಲಕ್ಷ್ಮೀನಾರಾಯಣ, ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನದ ವಿದ್ಯೆ ಕಲಿತವರು. ಗುರು ಚಂದ್ರಹಾಸ ಪುರಾಣಿಕರ ಮೆಚ್ಚಿನ ಶಿಷ್ಯರಾಗಿದ್ದ ಅವರು ಕೊನೆವರೆಗೂ ತಮ್ಮ ಗುರುಗಳ ಶೈಲಿಯನ್ನೇ ಮುಂದುವರಿಸಿ ಕೊಂಡು ಬಂದಿದ್ದರು. ಅತಿ ಸಣ್ಣ ವಯಸ್ಸಿನಲ್ಲೇ ಯಕ್ಷಲೋಕದಲ್ಲಿ ಗುರುತಿಸಿಕೊಂಡು ಜನರ ಮೆಚ್ಚಿನ ಕಲಾವಿದರಾಗಿ ಮೂಡಿಬಂದಿದ್ದರು.

ಬಡಗುತಿಟ್ಟಿನ ರಾಗಜ್ಞಾನದಲ್ಲಿ ಪ್ರಭುತ್ವ ಸಾಧಿಸಿದ್ದಲ್ಲದೆ, ಸಂಗೀತವನ್ನೂ ಅಭ್ಯಾಸ ಮಾಡಿಕೊಂಡಿದ್ದ ಭಾಗವತರು, ಭಜನೆ, ಕೀರ್ತನೆಗಳನ್ನು ಹಾಡಿ ಜನರ ಮನಸೂರೆಗೊಂಡಿದ್ದರು. ಅಷ್ಟೊಂದು ರಾಗಶುದ್ಧಿ ಅವರಲ್ಲಿತ್ತು ಎಂದು ಯಕ್ಷಗಾನ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಹಾಡುತ್ತಿದ್ದುದಲ್ಲದೆ, ಹಳೆ- ಹೊಸ ಪ್ರಸಂಗಗಳಲ್ಲಿ ಪ್ರಭುತ್ವ ಸಾಧಿಸಿದ್ದ ಅಪೂರ್ವ ಕಲಾವಿದರಾಗಿದ್ದರು. ವಾಸಂತಿ, ಕಲಾವತಿ, ಮಾಂಡ್, ಚಂದ್ರಕಂಸ್, ರೇವತಿ, ಇಂದೋಳಿ, ಅಮೃತವರ್ಷಿಣಿ ರಾಗಗಳಲ್ಲಿ ಅವರು ಹಾಡುತ್ತಿದ್ದರೆಂದರೆ ಪ್ರೇಕ್ಷಕರು ಮೈಮರೆಯುತ್ತಿದ್ದರು.

ಸುಬ್ರಹ್ಮಣ್ಯ ಆಚಾರ್ ಏರುಕಂಠದ ಭಾಗವತ. ಯಾವುದೇ ಶೃತಿ ಸಮಸ್ಯೆ ಅವರಿಗೆ ಕಾಡಿದ್ದೇ ಇಲ್ಲ. ತಾರಕ ಶೃತಿಯಲ್ಲೂ ಹಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದು ವಿಶೇಷವಾಗಿತ್ತು. ಉಡುಪಿ- ಕುಂದಾಪುರ ಭಾಗಗಳಲ್ಲಿನ ವಿಶಿಷ್ಟ ನಡುತಿಟ್ಟು ಯಕ್ಷಗಾನದ ಪ್ರತಿನಿಧಿಯಂತಿದ್ದರು. ನಡುತಿಟ್ಟಿನ ಕುಂಜಾಲುಶೈಲಿ ಭಾಗವತಿಕೆಯಲ್ಲಿ ಇವರನ್ನು ಮೀರಿಸುವವರೇ ಇರಲಿಲ್ಲ. ನಡುತಿಟ್ಟು ಶೈಲಿಯನ್ನು ಭಾಗವತಿಕೆಯಲ್ಲಿ ಅಳವಡಿಸಿಕೊಂಡು ಮೋಡಿ ಮಾಡುತ್ತಿದ್ದರು. ಯಕ್ಷಗಾನದ ಧನಾತ್ಮಕ ಪ್ರಯೋಗಗಳಿಗೆ ಅವರು ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಕಳೆದೊಂದು ದಶಕಕ್ಕೂ ಹೆಚ್ಚು ಕಾಲದಿಂದ ಮಂದಾರ್ತಿ ಮೇಳದಲ್ಲಿ ಭಾಗವತಿಕೆ ನಡೆಸುತ್ತಿದ್ದರು.

ಕುಂಜಾಲು ರಾಮಕೃಷ್ಣ ಭಾಗವತರ ಶಿಷ್ಯರಾಗಿರುವ ಇವರು ಕುಂಜಾಲು ಶೈಲಿಯನ್ನು ಇಂದು ಪ್ರಸ್ತುತ ಪಡಿಸುವ ಏಕೈಕ ಕಲಾವಿದರಾಗಿದ್ದಾರೆ. ಅಲ್ಲದೆ, ಹೊಸ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿದರೂ, ಹಳೆಯ ಯಕ್ಷಗಾನ ಮಟ್ಟು ಇರುವಂತೆ ಪ್ರಸ್ತುತಿಗೊಳಿಸುವ ಪರಂಪರೆಯ ಕಲಾವಿದ. ಇಂತಹ ಕಲಾ ಪ್ರಸ್ತುತಿ ಇಂದು ಮೆರಯಾಗುತ್ತಿದೆ. ಯಾವ ಸಂಗೀತಕ್ಕೂ ಮಾರು ಹೋದವರಲ್ಲ ಎಂದು ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಬನ್ನಂಜೆ ಸಂಜೀವ ಸುವರ್ಣರು ನೆನಪಿಸುತ್ತಾರೆ.

ನಡುಮನೆ ಯಕ್ಷಗಾನ ವಿಶೇಷ: ಸುಬ್ರಹ್ಮಣ್ಯ ಭಾಗವತರು ನಡುಮನೆ ಯಕ್ಷಗಾನದ ಪರಿಕಲ್ಪನೆಯನ್ನು ಜಾರಿಗೊಳಿಸಿದ್ದು ಅಪಾರ ಖ್ಯಾತಿ ತಂದುಕೊಟ್ಟಿತ್ತು. ಆರಂಭದಲ್ಲಿ ಏಕವ್ಯಕ್ತಿ ನಂತರ ಯುಗಳ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದರು. ಇದುವರೆಗೆ ನಡುಮನೆ ಯಕ್ಷಗಾನ ಸುಮಾರು 800ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News